ನವದೆಹಲಿ : ಶ್ರೀಮಂತರಿಗೆ ಸಿಗುವ ಅಡುಗೆ ಅನಿಲ ಸಬ್ಸಿಡಿಯನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ಸರ್ಕಾರದ ಬೊಕ್ಕಸ ಭರ್ತಿಮಾಡಲು ಮುಂದಾಗಿದೆ.
ಸಬ್ಸಿಡಿ ಪಡೆಯಲು ಇರುವ ಮಾನದಂಡವನ್ನು ಕೇಂದ್ರ ಸರ್ಕಾರ ಪರಿಷ್ಕರಣೆ ಮಾಡುವ ಸಾಧ್ಯತೆ ಇದ್ದು, ಫೆ.28ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಈ ಕುರಿತು ಚಿತ್ರಣ ನೀಡಲಿದ್ದಾರೆ ಎಂದು ಹೇಳಲಾಗಿದೆ.
ಅಡುಗೆ ಅನಿಲ ಹಾಗೂ ಸೀಮೆಎಣ್ಣೆಗೆ ನೀಡಲಾಗುತ್ತಿರುವ ಸಬ್ಸಿಡಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಬದಲಿಗೆ ಯಾರಿಗೆ ಸಬ್ಸಿಡಿ ಬೇಕು ಎಂಬ ಕುರಿತು ವರ್ಗೀಕರಣ ಮಾಡಲಿದೆ ಎಂದು ದೆಹಲಿ ಮೂಲದ ಆಂಗ್ಲಪತ್ರಿಕೆಯೊಂದು ವರದಿ ಮಾಡಿದೆ.
ಶೇ.30ರಷ್ಟು ಆದಾಯ ತೆರಿಗೆ ಪಾವತಿಸುತ್ತಿರುವವರಿಗೆ ಅಡುಗೆ ಅನಿಲ ಸಬ್ಸಿಡಿ ನೀಡಿದರೆ ಅದರಲ್ಲೇನಾದರೂ ಅರ್ಥವಿದೆಯೇ ಎಂಬುದು ವಿತ್ತ ಸಚಿವಾಲಯದ ಪ್ರಶ್ನೆಯಾಗಿದೆ.
ಕೇಂದ್ರ ಸರ್ಕಾರ ಪ್ರತಿ ಅಡುಗೆ ಅನಿಲ ಸಿಲಿಂಡರ್ಗೂ 350 ರೂ. ಸಬ್ಸಿಡಿ ಒದಗಿಸುತ್ತಿದೆ. ಸಬ್ಸಿಡಿಯ ಅಗತ್ಯವಿದ್ದವರಿಗೆ ಮಾತ್ರ ಅದನ್ನು ಮುಂದುವರಿಸಿ, ಉಳ್ಳವರಿಗೆ ಕಡಿತಗೊಳಿಸುವ ಮೂಲಕ ಸಬ್ಸಿಡಿ ರೂಪದಲ್ಲಿ ಆಗುತ್ತಿರುವ ವ್ಯಯವನ್ನು ತಪ್ಪಿಸಲು ಆಲೋಚನೆ ನಡೆಸಿದೆ. ಹಾಗೆ ಉಳಿತಾಯವಾಗುವ ಹಣವನ್ನು ಸಾಮಾಜಿಕ ಯೋಜನೆಗಳಿಗೆ ಬಳಸಿಕೊಳ್ಳುವ ಉದ್ದೇಶ ಹೊಂದಿದೆ ಎಂದು ಹೇಳಲಾಗಿದೆ. 1 ಕೋಟಿ ಗ್ರಾಹಕರನ್ನು ಸಬ್ಸಿಡಿ ಪರದೆಯಿಂದ ಹೊರಗಿಟ್ಟರೆ, ವಾರ್ಷಿಕ 4 ಸಾವಿರ ರೂ. ಹಣ ಆ ಜನರಿಂದ ಕೈತಪ್ಪುತ್ತದೆ. ಇದೇನು ಜನರಿಗೆ ಮಹಾ ಉಳಿತಾಯದ ಮೊತ್ತವಲ್ಲ ಎಂಬುದು ಕೇಂದ್ರದ ವಾದವಾಗಿದೆ.