BW News Bureau : ಅರ್ಕಾವತಿ ಬಡಾವಣೆ ಡಿನೋಟಿಫೀಕೇಷನ್ಗೆ ಸಂಬಂಧಪಟ್ಟಂತೆ ಇದ್ದ ದಾಖಲೆಯ ಕೊಠಡಿಗೆ ಹೊರಗಿನಿಂದ ಬೀಗ ಹಾಕಿಕೊಂಡ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಸಿಬ್ಬಂದಿ, ಒಳಗೆ ಕುಳಿತು ಕಡತ ವಿಲೇವಾರಿ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕೊಠಡಿಗೆ ಬೀಗ ಹಾಕಿಕೊಂಡು ಕೆಲಸ ಮಾಡುವುದರ ಜತೆಗೆ ಇಬ್ಬರು ಪೊಲೀಸ್ ಪೇದೆಗಳನ್ನು ಕೊಠಡಿಯ ಹೊರಗೆ ಭದ್ರತೆಗೆ ನಿಯೋಜಿಸಲಾಗಿದೆ. ಇದರ ಬೆನ್ನಲ್ಲೇ ಕೊಠಡಿಯ ಬೀಗ ತೆರವಿಗೆ ಬಿಡಿಎ ಆಯುಕ್ತ ಶ್ಯಾಂಭಟ್ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅರ್ಕಾವತಿ ಬಡಾವಣೆ ಡಿನೋಟಿಫೀಕೇಷನ್ ವಿವಾದ ಸುತ್ತಿಕೊಂಡಿರುವ ವೇಳೆಯೇ ಬಿಡಿಎ ಕಚೇರಿಯಲ್ಲಿ ಇಂತಹ ಬೆಳವಣಿಗೆ ನಡೆದಿರುವುದು ವಿವಾದ ಮತ್ತೂಂದು ಮಜಲು ಪಡೆದುಕೊಳ್ಳಲು ಕರಣವಾಗಿದೆ.
ನಿವೃತ್ತ ನ್ಯಾ.ಎಚ್.ಎಸ್.ಕೆಂಪಣ್ಣ ಆಯೋಗ ಹಗರಣ ಸಂಬಂಧ ಕಡತಗಳನ್ನು ನೀಡುವಂತೆ ಬಿಡಿಎಗೆ ಕೋರಿದ್ದರು. ಅಲ್ಲದೇ. ಬಡಾವಣೆ ರಚನೆಗೆ ಹೊರಡಿಸಿದ್ದ ಅಂತಿಮ ಅಧಿಸೂಚನೆಯಿಂದ ಪರಿಷ್ಕೃತ ಯೋಜನೆಗಳವರೆಗಿನ ಆದೇಶಗಳ ಕಡತಗಳನ್ನು ಜೋಪಾನವಾಗಿ ಕಾಪಾಡುವಂತೆ ನಗರಾಭಿವೃದ್ಧಿ ಇಲಾಖೆ ನೀಡಿರುವ ಸೂಚನೆ ಮೇರೆಗೆ ಕಳೆದ 20 ದಿನಗಳಿಂದ ಕಡತಗಳ ವಿಲೇವಾರಿ ಕೆಲಸದಲ್ಲಿ ತೊಡಗಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೊಠಡಿಗೆ ಬೀಗ ಹಾಕಿಕೊಂಡು ಕೆಲಸ ಮಾಡುತ್ತಿದ್ದು, ಈಗ ಬಹಿರಂಗಗೊಂಡಿದೆ.