ನವದೆಹಲಿ : 'ನವದೆಹಲಿ'ಯಲ್ಲಿ ಐತಿಹಾಸಿಕ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ನಡೆದ ಪರೇಡ್ ಮುಕ್ತಾಯಗೊಂಡಿದೆ.
ರಾಷ್ಟ್ರಗೀತೆ ಹಾಡುವ ಮೂಲಕ ರಾಜ್ ಪಥ್ ನಲ್ಲಿ ಪರೇಡ್ ಕಾರ್ಯಕ್ರಮವನ್ನು ಅಂತ್ಯಗೊಳಿಸಲಾಯಿತು. ಈ ವೇಳೆ, ಭಾರತಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಅರ್ಪಿಸಿದರು. ಅಮೆರಿಕದ ಅಧ್ಯಕ್ಷರು ಇದೇ ಪ್ರಥಮ ಬಾರಿಗೆ ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಭಾರತದ 66ನೇ ಗಣರಾಜ್ಯೋತ್ಸವದ ಐತಿಹಾಸಿಕ ಕಾರ್ಯಕ್ರಮಕ್ಕೆ ಒಬಾಮ ಹಾಗೂ ಅವರ ಮಿಶೆಲ್ ಸಾಕ್ಷಿಯಾದರು. ಇತ್ತೀಚಿನ ವರದಿ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ರಾಜ್ ಪಥ್ ನಿಂದ ನಿರ್ಗಮಿಸಿದ್ದಾರೆ. ಅಮೆರಿಕದ ಅಧ್ಯಕ್ಷರು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೊರಾಂಗಣದಲ್ಲಿ 45ನಿಮಿಷಕ್ಕಿಂತಲೂ ಹೆಚ್ಚು ಕಾಲ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ.
ಪಥಸಂಚಲನ ಆರಂಭಕ್ಕೂ ಮುನ್ನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇಬ್ಬರು ಹುತಾತ್ಮ ಯೋಧರಾದ ಮುಕುಂದ್ ವರದರಾಜನ್ ಹಾಗೂ ನೀರಜ್ ಕುಮಾರ್ ಸಿಂಗ್ ಅವರ ಕುಟುಂಬದವರಿಗೆ ಅಶೋಕ ಚಕ್ರ ಪ್ರಶಸ್ತಿ ಪ್ರದಾನ ಮಾಡಿದರು. ದೆಹಲಿಯಲ್ಲಿ ತುಂತುರು ಮಳೆ ನಡುವೆಯೇ ಪಥ ಸಂಚಲನ ಕಾರ್ಯಕ್ರಮ ನಡೆದಿದ್ದು ವಿಶೇಷವಾಗಿತ್ತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.