ಬೆಂಗಳೂರು : ಭಯೋತ್ಪಾದನೆ ವಿರುದ್ಧ ಎಲ್ಲರೂ ಒಗ್ಗೂಡಿ ಹೋರಾಡಬೇಕು ಉಗ್ರವಾದವನ್ನು ನಿರ್ಮೂಲನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲ ವಜುಭಾಯ್ ವಾಲ ಕರೆ ನೀಡಿದ್ದಾರೆ.
ಗಣರಾಜ್ಯೋತ್ಸವದ ಅಂಗವಾಗಿ ಜ.26ರಂದು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ವಜುಭಾಯ್ ವಾಲ, ಸ್ವಾತಂತ್ರ್ಯ ಬಳಿಕ ನಾವು ಅಭಿವೃದ್ಧಿಯತ್ತ ಮುನ್ನಡೆದಿದ್ದೇವೆ ಎಂದು ಹೇಳಿದ್ದಾರೆ. ಗಾಂಧೀಜಿ, ವಿವೇಕಾನಂದರು ದೇಶಕ್ಕಾಗಿ ಶ್ರಮಿಸಿದಂತವರು. ಇಂತಹ ಹಿರಿಯರ ಹಾದಿಯನ್ನು ಮಾದರಿಯಾಗಿ ಪರಿಗಣಿಸಿ ನಾವು ರಾಜ್ಯ ಮತ್ತು ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗೋಣ ಎಂದು ರಾಜ್ಯಪಾಲ ವಜುಭಾಯ್ ವಾಲ ಕರೆ ನೀಡಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಶ್ಲಾಘಿಸಿದ್ದಾರೆ. ಪ್ರಜಾಪ್ರಭುತ್ವ ಎಂದರೆ ಪ್ರಗತಿಪರ ಆಡಳಿತ, ಎಲ್ಲರನ್ನೊಳಗೊಂಡ ಆಡಳಿತವಾಗಿದೆ. ವಿಜ್ನಾನ ತಂತ್ರಜ್ನಾನ ಸೇರಿ ಎಲ್ಲಾ ಕ್ಷೇತ್ರಗಳಲ್ಲೂ ಭಾರತ ಅಭಿವೃದ್ಧಿ ಹೊಂದಿದೆ. ಭಾರತ ಅನೇಕತೆಯಲ್ಲಿ ಏಕತೆ ಪರಿಪಾಲಿಸುತ್ತಿರುವ ರಾಷ್ಟ್ರ. ವಿಜ್ನಾನ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.