ಪಾಟ್ನಾ : ಭವಿಷ್ಯದಲ್ಲಿ ಪ್ರಧಾನಮಂತ್ರಿಯಾಗುವ ತಮ್ಮ ಗುರಿಯನ್ನು ಈಡೇರಿಸಿಕೊಳ್ಳುವ ಸಲುವಾಗಿಯೇ ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಾಂಗ್ರೆಸ್ ಜೊತೆ ಕೈಜೋಡಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಬಿಹಾರದಲ್ಲಿ ಕರ್ಪೂರಿ ಠಾಕೂರ್ ಸ್ಮರಣಾರ್ಥ ಹಮ್ಮಿಕೊಂಡಿದ್ದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ನಿತೀಶ್ ಅವರು, ಸಮಾಜವಾದಿ ಮುಖಂಡ ಕರ್ಪೂರಿ ಠಾಕೂರ್ ಅವರ ತತ್ವದ ವಿರುದ್ಧ ಹೋಗುತ್ತಿದ್ದಾರೆ ಎಂದು ಶಾ ಆರೋಪಿಸಿದರು.
ಠಾಕೂರ್ ಅವರು ಸಮಾಜದಲ್ಲಿನ ಹಿಂದುಳಿದ ವರ್ಗಗಳನ್ನು ಮೇಲೆತ್ತುವ ಸಲುವಾಗಿ ಅಪಾರ ಕೊಡುಗೆ ನೀಡಿದ್ದು, ತಮ್ಮ ಇಡೀ ಜೀವನವನ್ನೇ ಅದಕ್ಕಾಗಿ ಮುಡುಪಾಗಿಟ್ಟಿದ್ದರು ಎಂದರು.
ಕರ್ಪೂರಿ ಠಾಕೂರ್ ತಮ್ಮ ಕೊನೆಯ ಉಸಿರುವವರೆಗೂ ಕಾಂಗ್ರೆಸ್ ವಿರುದ್ಧ ಹೋರಾಡಿದ್ದರು. ನೀವು ಅವರ ತತ್ವ, ಸಿದ್ದಾಂತದಿಂದ ಪ್ರಭಾವಿತಗೊಂಡು ಠಾಕೂರ್ ಅವರನ್ನು ಅನುಸರಿಸಿದ್ದೀರಿ. ಹಾಗಾಗಿ ನಿಮಗೆ(ನಿತೀಶ್) ಠಾಕೂರ್ ಅವರ ಬಗ್ಗೆ ಮಾತನಾಡುವ ಯಾವ ಹಕ್ಕು ಇಲ್ಲ ಎಂದು ಶಾ ದೂರಿದರು.