ನವದೆಹಲಿ : ಪ್ರಸಕ್ತ ಬಜೆಟ್ನಲ್ಲಿ ಹೊಸ ತೆರಿಗೆ ವಿನಾಯ್ತಿ ನೀಡದಿರುವ ಬಗ್ಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಸುಳಿವು ನೀಡಿದ್ದಾರೆ.
ಫೆಬ್ರವರಿ 28ಕ್ಕೆ ಅರುಣ್ ಜೇಟ್ಲಿ ಮಂಡಿಸಲಿರುವ ಬಜೆಟ್, ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ದಿಕ್ಸೂಚಿ ಬಜೆಟ್ ಆಗಲಿದೆ. ಆದರೆ, ಜನಪ್ರಿಯತೆಗೆ ಒತ್ತು ನೀಡುವ ಬದಲು ರಾಷ್ಟ್ರದ ಹಣಕಾಸು ಪರಿಸ್ಥಿತಿ ಸುಭದ್ರಗೊಳಿಸುವುದಕ್ಕೆ ಜೇಟ್ಲಿ ಆದ್ಯತೆ ನೀಡಲಿದ್ದಾರೆ. ಆಯವ್ಯಯ ಪತ್ರದಲ್ಲಿ ಸಮತೋಲನ ಕಾಯ್ದುಕೊಳ್ಳುವವರೆಗೂ ತೆರಿಗೆ ವಿನಾಯ್ತಿ ನೀಡಲು ಸಾಧ್ಯವಾಗದು ಎಂದು ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಣದುಬ್ಬರ ನಿಯಂತ್ರಣದಲ್ಲಿದೆ. ಅದರ ಫಲಶೃತಿ ನಿಧಾನವಾಗಿ ಹೊರಹೊಮ್ಮಬೇಕಿದೆ. ಶೇ.4.5ರ ಆಜುಬಾಜಿನಲ್ಲಿರುವ ವಿತ್ತೀಯ
ಕೊರತೆಯನ್ನು ಮುಂದಿನ 2 ವರ್ಷಗಳಲ್ಲಿ ಶೇ.3ಕ್ಕೆ ತಗ್ಗಿಸುವ ಗುರಿ ಮೋದಿ ಸರ್ಕಾರದ್ದಾಗಿದೆ.
ಈ ನಿಟ್ಟಿನಲ್ಲಿಯೇ ಜೇಟ್ಲಿ ಬಜೆಟ್ ಸಿದ್ಧಪಡಿಸುತ್ತಿದ್ದಾರೆ. ದಾವೊಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಪಾಲ್ಗೊಂಡಿರುವ ಜೇಟ್ಲಿ, ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ, ಬಜೆಟ್ ನಲ್ಲಿ ಸಮತೋಲನ ಕಾಯ್ದುಕೊಳ್ಳುವವರೆಗೆ ಯಾವುದೇ ತೆರಿಗೆ ಹಿಂದಕ್ಕೆ ಪಡೆಯುವುದು ಕಷ್ಟ ಎಂದು ಹೇಳಿದ್ದಾರೆ. ಭಾರತ ಈಗ ವಿಶ್ವ ಆರ್ಥಿಕತೆಯ ಕೇಂದ್ರಬಿಂದುವಾಗಿದೆ. ಹೂಡಿಕೆದಾರರಲ್ಲಿ ಸಕಾರಾತ್ಮಕ ಭಾವನೆ ಶೀಘ್ರದಲ್ಲಿಯೇ ಹೂಡಿಕೆಯಾಗಿ ಪರಿವರ್ತನೆಗೊಳ್ಳಲಿದೆ ಎಂದು ಹೇಳಿದ್ದಾರೆ.