ನವದೆಹಲಿ : ಫೆ.7ರಂದು ನಡೆಯಲಿರುವ ದೆಹಲಿ ಚುನಾವಣೆಗೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಲಾಲಾ ಲಜ್ಪತ್ ರಾಯ್ ಅವರ ಪುತ್ಥಳಿಗೆ ಕೇಸರಿ ಶಾಲುವನ್ನು ಹೊದಿಸಿದ್ದು ಆಮ್ ಆದ್ಮಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದೆ.
ಲಾಲಾ ಲಜ್ಪತ್ ರಾಯ್ ಅವರ ಪುತ್ಥಳಿಗೆ ದೆಹಲಿ ಬಿಜೆಪಿ ಸಿ.ಎಂ ಅಭ್ಯರ್ಥಿ ಕಿರಣ್ ಬೇಡಿ ಕೇಸರಿ ಶಾಲು ಹೊದಿಸಿರುವುದನ್ನು ತೀವ್ರವಾಗಿ ಖಂಡಿಸಿರುವ ಆಮ್ ಆದ್ಮಿ ಪಕ್ಷ, ಸ್ವಾತಂತ್ರ್ಯ ಹೋರಾಟಗಾರರನ್ನು ಕೇಸರೀಕರಣಗೊಳಿಸಬೇಡಿ ಎಂದು ಕಿರಣ್ ಬೇಡಿಗೆ ಹೇಳಿದೆ.
ಕಿರಣ್ ಬೇಡಿ ಕೃಷ್ಣನಗರ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ನಾಮ ಪತ್ರ ಸಲ್ಲಿಸಲಿದ್ದಾರೆ. ಇದಕ್ಕೂ ಮುನ್ನ ರೋಡ್ ಶೋ ನಡೆಸಿದ್ದ ಅವರು ಲಾಲಾ ಲಜ್ಪತ್ ರಾಯ್ ಪುತ್ಥಳಿಗೆ ನಮನ ಸಲ್ಲಿಸಿ ಶಾಲುವನ್ನು ಹೊದಿಸಿದ್ದರು.
ಕಿರಣ್ ಬೇಡಿ ವಿರುದ್ಧ ಕಾಂಗ್ರೆಸ್ ನಾಯಕ ಅಜಯ್ ಮಾಕೇನ್ ವಾಗ್ದಾಳಿ ನಡೆಸಿದ್ದು, ಬೇಡಿ ಅವರು ಉತ್ತಮ ಪೊಲೀಸ್ ಅಧಿಕಾರಿಯಾಗಿದ್ದರು, ಆದರೆ ಅವರು ಉತ್ತಮ ಆಡಳಿತಗಾರರಲ್ಲ ಎಂದು ಟೀಕಿಸಿದೆ. ಅಲ್ಲದೇ ಅಧಿಕಾರದ ಆಸೆಯಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.