BW News Bureau : ಫೆ.8ರಂದು ಬೆಂಗಳೂರಿನಲ್ಲಿ ಹಿಂದೂ ಸಮಾಜೋತ್ಸವ ನಡೆಯಲಿದ್ದು, ಅದನ್ನು ಯಶಸ್ಸುಗೊಳಿಸಲು ಸಹಕರಿಸುವ ಸಂಬಂಧ ಸಂಘ ಪರಿವಾರದ ಮುಖಂಡರು ರಾಜ್ಯ ಬಿಜೆಪಿ ನಾಯಕರ ಜತೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.
ನಗರದ ಚಾಮರಾಜಪೇಟೆಯಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಕೇಂದ್ರ ಕಚೇರಿ ಕೇಶವ ಕೃಪಾದಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಹಿಂದೂ ಸಮಾಜೋತ್ಸವ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆದಿದೆ.
ಸಭೆಯಲ್ಲಿ ಸಂಘ ಪರಿವಾರದ ಮುಖಂಡರಾದ ಮಂಗೇಶ್ ಬೆಂಡೆ, ಮೈ.ಚ.ಜಯದೇವ್, ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂಪ್ಪ, ಅನಂತಕುಮಾರ್, ಡಿ.ವಿ.ಸದಾನಂದಗೌಡ, ಆರ್.ಅಶೋಕ್, ಅರವಿಂದ್ ಲಿಂಬಾವಳಿ, ಸಿ.ಟಿ.ರವಿ, ಸಂತೋಷ್ ಮೊದಲಾದವರು ಪಾಲ್ಗೊಂಡಿದ್ದರು.
ಈ ಸಮಾಜೋತ್ಸವವನ್ನು ನಗರದ ಅರಮನೆ ಮೈದಾನದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಈಗಾಗಲೇ ರಾಜ್ಯದ ಹಲವೆಡೆ ಹಿಂದೂ ಸಮಾಜೋತ್ಸವಗಳು ನಡೆಯುತ್ತಿದ್ದರೂ, ರಾಜ್ಯದ ರಾಜಧಾನಿಯಲ್ಲಿ ನಡೆಯುವುದರಿಂದ ಹೆಚ್ಚಿನ ಜನರನ್ನು ಸೇರಿಸುವ ಮೂಲಕ ಸಂದೇಶ ರವಾನಿಸುವ ಗುರಿ ಹೊಂದಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜತೆಗೆ ಪಕ್ಷದ ಸಂಘಟನೆ ವತಿಯಿಂದ ಕಳೆದ ವರ್ಷ ನಡೆದ ವಿವಿಧ ಕಾರ್ಯಕ್ರಮಗಳು, ಹೋರಾಟಗಳ ಬಗ್ಗೆಯೂ ಬಿಜೆಪಿ ನಾಯಕರು ವರದಿ ಸಲ್ಲಿಸಿದ್ದಾರೆ. ಇದಕ್ಕೆ ಪೂರಕವಾಗಿ ಸಂಘ ಪರಿವಾರದ ಮುಖಂಡರು ಪಕ್ಷ ಸಂಘಟನೆ ದೃಷ್ಟಿಯಿಂದ ಹಲವಾರು ಸಲಹೆ ಸೂಚನೆಗಳನ್ನು ನೀಡಿದರು. ಮಠಗಳ ನಿಯಂತ್ರಣ ವಿಧೇಯಕ, ಸದಸ್ಯತ್ವ ನೋಂದಣಿ ಮತ್ತಿತರ ಪ್ರಚಲಿತ ವಿಷಯಗಳ ಬಗ್ಗೆಯೂ ಸಮಾಲೋಚನೆ ನಡೆಯಿತು ಎಂದು ತಿಳಿದು ಬಂದಿದೆ.
ಆದರೆ, ಹಿಂದೂ ಸಮಾಜೋತ್ಸವ ಕುರಿತಂತೆ ಹೆಚ್ಚಿನ ಚರ್ಚೆ ನಡೆದಿದ್ದು, ಬೆಂಗಳೂರನ್ನು ಪ್ರತಿನಿಧಿಸುವ ಅನಂತಕುಮಾರ್, ಸದಾನಂದಗೌಡ, ಅಶೋಕ್ ಅವರು ಇದರ ಜವಾಬ್ದಾರಿ ಹೊತ್ತುಕೊಳ್ಳುವಂತೆ ಸಲಹೆ ನೀಡಲಾಗಿದೆ.