ನವದೆಹಲಿ : 'ಓಬಳಾಪುರಂ ಮೈನಿಂಗ್ ಕಂಪನಿ'ಯ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಸುಪ್ರೀಂ ಕೋರ್ಟ್ ನಿಂದ ಷರತ್ತುಬದ್ಧ ಜಾಮೀನು ದೊರೆತಿದೆ.
ಜ.20ರಂದು ಸುಪ್ರೀಂ ಕೋರ್ಟ್ ನಲ್ಲಿ ರೆಡ್ಡಿ ಜಾಮೀನು ಅರ್ಜಿ ವಿಚಾರಣೆ ನಡೆಯಿತು. 10 ಲಕ್ಷ ರೂಪಾಯಿ ಮೌಲ್ಯದ 2 ಶೂರಿಟಿ ನೀಡುವುದು, ಪಾಸ್ ಪೋರ್ಟ್ ನ್ನು ಸ್ಥಳೀಯ ನ್ಯಾಯಾಲಯದಲ್ಲಿ ಸಲ್ಲಿಸುವುದೂ ಸೇರಿದಂತೆ ಹಲವು ಷರತ್ತುಗಳನ್ನು ಜನಾರ್ದನ ರೆಡ್ಡಿ ಅವರಿಗೆ ವಿಧಿಸಲಾಗಿದೆ. ಬಿಡುಗಡೆಯಾದ ಬಳಿಕ ತನಿಖೆ ವೇಳೆ ಪ್ರಭಾವ ಬೀರಬಾರದು ಹಾಗೂ ಬಳ್ಳಾರಿಗೆ ತೆರಳದಿರುವಂತೆ ಸುಪ್ರೀಂ ಕೋರ್ಟ್ ರೆಡ್ಡಿಗೆ ಷರತ್ತು ವಿಧಿಸಿದೆ.
ಜನಾರ್ದನ ರೆಡ್ಡಿ ಅವರ ವಿರುದ್ಧ ಕರ್ನಾಟಕದಲ್ಲಿ ದಾಖಲಾಗಿದ್ದ ಎಲ್ಲಾ ಪ್ರಕರಣಗಳಲ್ಲಿ ಈಗಾಗಲೇ ಜಾಮೀನು ದೊರೆತಿತ್ತು. ಆದರೆ ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮದಲ್ಲಿ ಜಾಮೀನು ದೊರೆಯದ ಕಾರಣ ರೆಡ್ಡಿಗೆ ಬಿಡುಗಡೆ ಭಾಗ್ಯ ದೊರೆತಿರಲಿಲ್ಲ. ಆದರೆ ಇದೀಗ ಸುಪ್ರೀಂ ಕೋರ್ಟ್ ನಿಂದ ಜಾಮೀನು ದೊರೆತಿದೆ. ಆದೇಶ ಪ್ರತಿ ಆಂಧ್ರಪ್ರದೇಶದ ವಿಶೇಷ ಕೋರ್ಟ್ ಕೈತಲುಪಿ ಷರತ್ತುಗಳನ್ನು ಪೂರೈಸಿದ ನಂತರ ಬಿಡುಗಡೆ ಆದೇಶ ಪ್ರತಿ ಬೆಂಗಳೂರು ಜೈಲು ಅಧಿಕಾರಿಗಳಿಗೆ ತಲುಪಲಿದ್ದು ಜನಾರ್ದನ ರೆಡ್ಡಿ ನಾಳೆ ಅಥವಾ ಜ.22ರಂದು ಜೈಲಿನಿಂದ ಬಿಡುಗಡೆಗೊಳ್ಳಲಿರುವ ಸಾಧ್ಯತೆ ಇದೆ.
ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಒಟ್ಟು 8 ಪ್ರಕರಣಗಳು ದಾಖಲಾಗಿದ್ದವು, ಕರ್ನಾಟಕದ 5 ಹಾಗೂ ಆಂಧ್ರಪ್ರದೇಶದ 2 ಕೇಸ್ ನಲ್ಲಿ ಈಗಾಗಲೇ ಜಾಮೀನು ಸಿಕ್ಕಿತ್ತಾದರೂ ಮೈನಿಂಗ್ ಪ್ರಕರಣದಲ್ಲಿ ಈವರೆಗೂ ಜಾಮೀನು ದೊರೆತಿರಲಿಲ್ಲ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ದಂತೆ 2011ರ ಸೆ.5ರಂದು ರೆಡ್ಡಿಯನ್ನು ಸಿಬಿಐ ಬಂಧಿಸಿತ್ತು.