ನವದೆಹಲಿ : ಬಿಜೆಪಿ, ಕಾಂಗ್ರೆಸ್ ನವರು ಹಣ ನೀಡಿದರೆ ತೆಗೆದುಕೊಳ್ಳಿ ಎಂಬ ಹೇಳಿಕೆ ನೀಡಿದ್ದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ದೆಹಲಿಯ ಉತ್ತಮ್ ನಗರದಲ್ಲಿ ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಾರ್ವಜನಿಕರನ್ನುದ್ದೇಶಿ ಭಾಷಣ ಮಾಡುವ ವೇಳೆ ಕೇಜ್ರಿವಾಲ್, ನಿಮ್ಮ ಮತ ಪಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ನೀಡುವ ಹಣವನ್ನು ತೆಗೆದುಕೊಳ್ಳಿ ಆದರೆ ಮತವನ್ನುಮಾತ್ರ ಆಮ್ ಆದ್ಮಿ ಪಕ್ಷಕ್ಕೆ ಚಲಾಯಿಸಿ ಎಂದು ಹೇಳಿದ್ದರು.
ಅಲ್ಲದೇ ಒಂದು ವೇಳೆ ಹಣ ನೀಡದಿದ್ದರೆ ಕೇಳಿ ಪಡೆಯಿರಿ ಎಂದು ಸಲಹೆ ನೀಡಿದ್ದರೆ. ಭ್ರಷ್ಟಾಚಾರವನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಅರವಿಂದ್ ಕೇಜ್ರಿವಾಲ್ ಅವರೇ ಈಗ ಭ್ರಷ್ಟಾಚಾರಕ್ಕೆ ಮಣೆಹಾಕುವ ಹೇಳಿಕೆ ನೀಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಸ್ವತ: ಆಪ್ ನಾಯಕರು ಕೂಡ ಈ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಅರವಿಂದ್ ಕೇಜ್ರಿವಾಲ್ ಈ ಹೇಳಿಕೆಗೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ನಿಟ್ಟಿನಲ್ಲಿ ಕೇಜ್ರಿವಾಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಇತ್ತೀಚೆಗಷ್ಟೆ ಬಿಜೆಪಿ ನಾಯಕ ಸತೀಶ್ ಉಪಾಧ್ಯಾಯ ವಿರುದ್ದ ಭ್ರಷ್ಟಾಚಾರ ಆರೋಪವನ್ನು ಮಾಡಿದರ ಪರಿಣಾಮ ಬಿಜೆಪಿ ನಾಯಕರು ಕೇಜ್ರಿವಾಲ್ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದ್ದರು.