ನವದೆಹಲಿ : ಗಂಗಾನದಿ ಶುದ್ಥಿಕರಣ ನಿಧಾನಗತಿಯಲ್ಲಿ ಸಾಗುತ್ತಿರುವ ಕುರಿತು ಸುಪ್ರೀಂಕೋರ್ಟ್ ಮತ್ತೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಗಂಗಾನದಿ ಶುದ್ಧಿಕರಣ ಕ್ರಿಯಾ ಯೋಜನೆ ಮಂದಗತಿಯಲ್ಲಿ ಸಾಗುತ್ತಿದ್ದು, ಇದೇ ಆಡಳಿತಾವಧಿಯಲ್ಲಿ ಮುಗಿಸುತ್ತೀರಾ ಅಥವಾ ಮುಂದಿನ ಆಡಳಿತಾವಧಿಗೂ ತೆಗೆದುಕೊಂಡು ಹೋಗುತ್ತೀರಾ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ಪ್ರಶ್ನಿಮಾಡಿದೆ.
ಕಳೆದ 30 ವರ್ಷಗಳಿಂದ ಗಂಗಾ ಶುದ್ಧಿಕರಣಕ್ಕಾಗಿ ಕಾರ್ಯ ನಡೆಯುತ್ತಿದ್ದು, ಇಲ್ಲಿಯವರೆಗೂ ಇದಕ್ಕಾಗಿ ಸುಮಾರು 2000 ಕೋಟಿ ವೆಚ್ಚವಾಗಿದೆ ಹೊರತು ಯಾವುದೇ ಪ್ರಗತಿ ಕಾಣುತ್ತಿಲ್ಲವೆಂಬ ಅಂಶವನ್ನು ಪ್ರಸ್ತಾಪಿಸಿದ ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠದ ನ್ಯಾಯಮೂರ್ತಿ ಟಿ.ಎಸ್ ಟಾಕೂರ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಕೇಂದ್ರ ಸರ್ಕಾರ ಪ್ರತಿನಿಧಿ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರು, ಗಂಗಾನದಿ ಶುದ್ಧಿಕರಣ ಯೋಜನೆ 2018ರೊಳಗೆ ಮುಗಿಸಲಾಗುವುದು ಎಂದರು. ಈಗಾಗಲೇ ಗಂಗಾನದಿಯುದ್ದಕ್ಕೂ ಸುಮಾರು 118 ಪಟ್ಟಣಗಳಲ್ಲಿ ಕೊಳಚೆ ನೀರು ಘಟಕಗಳ ಸ್ಥಾಪನೆಗೆ ಗುರುತಿಸಲಾಗಿದೆ ಎಂದರು.
2,500 ಕಿ.ಮೀ ದೂರದ ಗಂಗಾನದಿಯ ಶುದ್ಧಿಕರಣಕ್ಕೆ ಸಂಬಂಧಿಸಿದಂತೆ ಕಳೆದ ಆರು ತಿಂಗಳಲ್ಲೇ ಇದು ಎರಡನೇ ಬಾರಿಗೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.