ನವದೆಹಲಿ : ಪತ್ನಿ ಸುನಂದಾ ಪುಷ್ಕರ್ ಸಾವಿನ ಬಳಿಕ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಪೊಲೀಸರಿಗೆ ನೀಡಿದ್ದ ಮೊದಲ ಹೇಳಿಕೆ ಈಗ ಬಹಿರಂಗಗೊಂಡಿದೆ. ಈ ಹೇಳಿಕೆಯಲ್ಲಿ ಸುನಂದಾ ಜತೆ ಸಣ್ಣ ಮನಸ್ತಾಪವಿತ್ತು. ಆದರೆ, ಅವೆಲ್ಲವೂ ಬಗೆಹರಿದಿದ್ದವು ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದರು.
ಸುನಂದಾ ನಿಗೂಢವಾಗಿ ಸಾವಿಗೀಡಾದ ಒಂದು ದಿನದ ಬಳಿಕ ಅಂದರೆ, ಜ.19ರಂದು ಶಶಿ ತರೂರ್ ಅವರಿಂದ ಪೊಲೀಸರು ಈ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು.
'ನನ್ನ ಮತ್ತು ಸುನಂದಾ ನಡುವೆ ಸಣ್ಣ ಪ್ರಮಾಣದ ಮನಸ್ತಾಪವಿತ್ತು. ಸಣ್ಣ ಪುಟ್ಟ ವಾಗ್ವಾದ ನಡೆದಾಗಲೂ ಸುನಂದಾ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದರು. ಬಳಿಕ ಸುಮ್ಮನಾಗುತ್ತಿದ್ದರು. ನಿದ್ರಾಹೀನತೆ ಇದ್ದುದ್ದರಿಂದ ಸುನಂದಾ ಮಾತ್ರೆ ಸೇವಿಸುತ್ತಿದ್ದರು, ಸಾಯುವ ಮೊದಲು 2 ದಿನ ಊಟ ಮಾಡಿರಲಿಲ್ಲ. ಜ.16ರಂದು ಅಣಬೆಯ ಸೂಪ್ ಸೇವಿಸಿದ್ದರು. ನಾನೆ ಕೈಯ್ನಾರೆ ಊಟ ಮಾಡಿಸಿದ್ದೆ. ಅಂದು ಎಳನೀರನ್ನೂ ಅವರು ಸೇವಿಸಿದ್ದರು' ಎಂದು ಶಶಿ ತರೂರ್ ಪೊಲೀಸರಿಗೆ ಹೇಳಿಕೆ ನೀಡಿದ್ದರು.
ಸುನಂದಾ- ಶಶಿ ತರೂರ್ ನಡುವೆ ಒಂದು ವರ್ಷದಿಂದ ನಿರಂತರವಾಗಿ ವಾಗ್ವಾದ ನಡೆಯುತ್ತಿತ್ತು ಎಂದು ತರೂರ್ ಮನೆಕೆಲಸದ ನೌಕರ ನಾರಾಯಣ್ ಎಂಬಾತ ಕೆಲ ದಿನಗಳ ಹಿಂದಷ್ಟೇ ಪೊಲೀಸರಿಗೆ ತಿಳಿಸಿದ್ದ.
ಈ ನಡುವೆ ಪತ್ನಿ ಸುನಂದಾ ಪುಷ್ಕರ್ ನಿಗೂಢ ಸಾವಿನ ಹಿನ್ನೆಲೆಯಲ್ಲಿ ತಮ್ಮ ಬೆನ್ನತ್ತಿರುವ ಮಾಧ್ಯಮಗಳ ವಿರುದ್ಧ ಸಂಸದ ಶಶಿ ತರೂರು ಕಿಡಿಕಾರಿದ್ದಾರೆ. ಪ್ರಕರಣದ ಬಗ್ಗೆ ಹೊಸದಾಗಿ ಹೇಳಲು ನನ್ನ ಬಳಿ ಏನೂ ಉಳಿದಿಲ್ಲ. ನಿಮಗೆ ನನಗಿಂತ ಹೆಚ್ಚು ವಿಷಯ ತಿಳಿದಿರುವಂತೆ ಕಾಣಿಸುತ್ತಿದೆ. ನೀವು ಸುಮ್ಮನೆ ನಿಮ್ಮ ಸಮಯವನ್ನು ವ್ಯರ್ಥಗೊಳಿಸುತ್ತಿದ್ದೀರಿ. ಕೊಲೆಗಾರ ಯಾರು ಅಂತ ತಿಳಿದಿದ್ದರೆ ದಯವಿಟ್ಟು ಪೊಲೀಸರಿಗೆ ತಿಳಿಸಿ ಸಹಕರಿಸಿ ಎಂದು ಟಾಂಗ್ ನೀಡಿದ್ದಾರೆ. ಈ ಮಧ್ಯೆ ತರೂರ್ ದೆಹಲಿಗೆ ಹಿಂದಿರುಗಿದ್ದು, ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಅಲ್ಲದೇ ತರೂರ್ ಮನೆಯ ಸುತ್ತ ಬಿಗಿ ಭದ್ರತೆ ಒದಗಿಸಲಾಗಿದೆ.