ಅಹಮದಾಬಾದ್ : ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಭಾರತದ ಅರ್ಥ ವ್ಯವಸ್ಥೆಗೆ ಪೂರಕವಾಗಿ ವಿದೇಶಿ ಬಂಡವಾಳ ಹೂಡಿಕೆ ಇಂದಿನ ಅಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಪ್ರತಿಪಾದಿಸಿದ್ದಾರೆ.
ಗುಜರಾತ್ನ ಗಾಂಧಿನಗರದಲ್ಲಿ ಇಂದು ಆಯೋಜಿಸಿರುವ ವಿಶ್ವ ಬಂಡವಾಳ ಹೂಡಿಕೆದಾರರ ವೈಬ್ರೆಂಟ್ ಗುಜರಾತ್ 7ನೇ ಸಮಾವೇಶದಲ್ಲಿ ಮಾತನಾಡಿದ ಮೋದಿ, ಇಡೀ ವಿಶ್ವವೇ ಒಂದು ಕುಟುಂಬವಿದ್ದಂತೆ, ಈ ತತ್ವಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
ವಸುಧೈವ ಕುಟುಂಬಕಂ, ಅಂದರೆ ಇಡೀ ವಿಶ್ವವೇ ಒಂದು ಕುಟುಂಬ. ನಾವೆಲ್ಲರೂ ಈ ಕುಟುಂಬದ ಸದಸ್ಯರು. ಹಾಗಾಗಿ ಎಲ್ಲರ ಯೋಗಕ್ಷೇಮವೂ ಎಲ್ಲರಿಗೂ ಸೇರಿದೆ ಎಂದರು. ಈ ಸಮಾವೇಶದಲ್ಲಿ ಅನೇಕ ವಿದೇಶಿ ಗಣ್ಯರು ಸೇರಿದ್ದಾರೆ. ಇದರಲ್ಲಿ ಹೊಸದಾಗಿ ಅಮೆರಿಕ, ಇಂಗ್ಲೆಂಡ್, ಸಿಂಗಾಪುರ, ದಕ್ಷಿಣ ಅಮೆರಿಕ ಮುಂತಾದ ರಾಷ್ಟ್ರಗಳ ಪ್ರತಿನಿಧಿಗಳು ಆಗಮಿಸಿದ್ದಾರೆ. ನಿಮ್ಮೆಲ್ಲರ ಸಹಭಾಗಿತ್ವ ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ತಿಳಿಸಿದರು.
ಮೇಕ್ ಇನ್ ಇಂಡಿಯಾ ಎಂಬ ನಮ್ಮ ಸರ್ಕಾರದ ಘೋಷಣೆಗೆ ವ್ಯಾಪಕ ಬೆಂಬಲ ದೊರೆತಿರುವುದು ಕೂಡ ನಮಗೆ ಹೆಮ್ಮೆ ಎನಿಸಿದೆ ಎಂದ ಮೋದಿ, ಇಂದು ದೇಶದ ಹಲವಾರು ರಾಷ್ಟ್ರಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಈ ಅಭಿವೃದ್ಧಿಗೆ ವಿಶ್ವದಾದ್ಯಂತ ಗಾಢವಾಗಿ ಹೆಚ್ಚುತ್ತಿರುವ ಭಯೋತ್ಪಾದಕತೆ ಅಡ್ಡಗಾಲಾಗಿದೆ. ಈ ತೀವ್ರವಾದದ ನಿಗ್ರಹಕ್ಕೆ ಎಲ್ಲ ರಾಷ್ಟ್ರಗಳು ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ ಎಂದು ಕರೆ ನೀದಿದರು.
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ , ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್, ಅಮೆರಿಕ ಮೂಲದ ಎಮರ್ಸಿನ್ ಎಲೆಕ್ಟ್ರಿಕ್ ಕಂಪನಿ ಮುಖ್ಯಸ್ಥ ಡೇವಿಡ್ ಫರ್ ಸೇರಿದಂತೆ ಅನೇಕ ವಿದೇಶಿ ಗಣ್ಯರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.