ನವದೆಹಲಿ : ಕಾಂಗ್ರೆಸ್ ಪಕ್ಷವು ಕಳೆದ ವರ್ಷದ ಲೋಕಸಭೆ ಚುನಾವಣೆ ಮತ್ತು ಇತ್ತೀಚಿನ ವಿಧಾನಸಭೆ ಚುನಾವಣೆಗಳಲ್ಲಿ ಸತತವಾಗಿ ಸೋತಿರುವ ಹಿನ್ನೆಲೆಯಲ್ಲಿ, ಪಕ್ಷಕ್ಕೆ ಆರ್ಥಿಕ ಸಂಕಷ್ಟ ಉಂಟಾಗಿದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷದ ನಿಧಿಯನ್ನು ಬೇಕಾಬಿಟ್ಟಿ ಖರ್ಚು ಮಾಡಬಾರದು ಎಂಬ ಸೂಚನೆ ಹೈಕಮಾಂಡ್ನಿಂದ ಹೋಗಿದೆ.
ಕಾಂಗ್ರೆಸ್ ನಾಯಕರು ಇನ್ನು ಪಕ್ಷದ ಕೆಲಸಕ್ಕಾಗಿ ವಿವಿಧೆಡೆ ತೆರಳುವಾಗ ಅಗತ್ಯ ಬಿದ್ದರೆ ಮಾತ್ರ ವಿಮಾನ ಬಳಸಬೇಕು. ಬಾಡಿಗೆ ವಿಮಾನಗಳನ್ನಂತೂ ಬಳಸಲೇ ಕೂಡದು. ಹೆಚ್ಚಾಗಿ ರೈಲಿನಲ್ಲೇ ಪ್ರಯಾಣಿಸಬೇಕು. ದಿಲ್ಲಿ ಮತ್ತು ದೇಶದ ಇತರ ಭಾಗಗಳ ನಾಯಕರಿಗೆ ಪಕ್ಷದ ವತಿಯಿಂದ ನೀಡಲಾಗಿರುವ ವಾಹನ ಸಂಖ್ಯೆಗಳು, ವಿವಿಧ ಭತ್ಯೆಗಳನ್ನು ಕಡಿತಗೊಳಿಸಲಗುವುದು ಎಂಬ 'ಮಿತವ್ಯಯ ಆದೇಶ' ವರಿಷ್ಠರಿಂದ ರವಾನೆಯಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಮಹಾರಾಷ್ಟ್ರ, ಹರ್ಯಾಣಾ, ಕಾಶ್ಮೀರ, ಜಾರ್ಖಂಡ್, ಆಂಧ್ರಪ್ರದೇಶದಂತಹ ರಾಜ್ಯಗಳನ್ನು ಕಾಂಗ್ರೆಸ್ ಕಳೆದುಕೊಂಡ ನಂತರ ಪಕ್ಷಕ್ಕೆ ನಿಧಿ ಹರಿವು ಕುಂಠಿತವಾಗಿದೆ. ಉದ್ಯಮಿಗಳು, ಕಂಪನಿಗಳು ಯಾವ ಪಕ್ಷ ಅಧಿಕಾರದಲ್ಲಿರುತ್ತೋ ಅವರತ್ತ ಒಲವು ತೋರುತ್ತಾರೆ. ಇದು ಸಹಜ ಪ್ರಕ್ರಿಯೆ. ಹೀಗಾಗಿ ಈ ರಾಜ್ಯಗಳಲ್ಲಿ ಪಕ್ಷಕ್ಕೆ ಹೆಚ್ಚು ದೇಣಿಗೆ ಹರಿದು ಬರುತ್ತಿಲ್ಲ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.
ಹೀಗಾಗಿ ಸದ್ಯ ಕಾಂಗ್ರೆಸ್ ಅಧಿಕಾರದಲ್ಲಿ ಇರುವ ದೊಡ್ಡ ರಾಜ್ಯವೆಂದರೆ ಕರ್ನಾಟಕ. ಪಕ್ಷಕ್ಕೆ ನಿಧಿ ಸಂಗ್ರಹ ಇಲ್ಲೇ ಹೆಚ್ಚಾಗಬೇಕು. ಆದರೆ ಪಕ್ಷದ ಇಡೀ ದೇಶದ ಖರ್ಚು ನಿಭಾವಣೆ ಈ ಒಂದೇ ರಾಜ್ಯದಿಂದ ಸಾಧ್ಯವಿಲ್ಲ ಎನ್ನಲಾಗುತ್ತಿದೆ.
ಈ ನಿಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಖರ್ಚು-ವೆಚ್ಚಕ್ಕೆ ಕಡಿವಾಣ ಹಾಕಲು ತಂತ್ರ ರೂಪಿಸಲಾಗಿದೆ.
- ಕಾಂಗ್ರೆಸ್ ರಾಜ್ಯ ಉಸ್ತುವಾರಿಗಳು ಅಗತ್ಯವಿದ್ದರೆ ಮಾತ್ರ ರಾಜ್ಯಕ್ಕೆ ತೆರಳಬೇಕು
- ಮುಖಂಡರು ವಿಮಾನದ ಬದಲು ಹೆಚ್ಚಾಗಿ ರೈಲಲ್ಲೇ ಪ್ರಯಾಣಿಸಬೇಕು.
- ಖಾಸಗಿ ಬಾಡಿಗೆ ವಿಮಾನವನ್ನಂತೂ ಬಳಸಲೇಕೂಡದು.
- ಪಕ್ಷದ ಮುಖಂಡರಿಗೆ ನೀಡಲಾಗುವ ಇಂಧನ ಮತ್ತು ಇತರ ಭತ್ಯೆ ಕಡಿತ ಮಾಡಲಾಗುವುದು
- ಚುನಾವಣೆಯಲ್ಲಿ ಅಭ್ಯರ್ಥಿಗಳು ಅವರದ್ದೇ ಸಂಪನ್ಮೂಲ ಹುಡುಕಿಕೊಳ್ಳಬೇಕು