ಶ್ರೀನಗರ : ಚುನಾವಣೆ ಫಲಿತಾಂಶ ಅತಂತ್ರವಾಗಿ ಪಕ್ಷಗಳ ನಡುವೆ ಮೈತ್ರಿ ಸಾಧ್ಯವಾಗದ ಕಾರಣ ಜಮ್ಮು-ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಯಾಗಿದೆ.
ಜಮ್ಮು-ಕಾಶ್ಮೀರದ ಹಂಗಾಮಿ ಮುಖ್ಯಮಂತ್ರಿಯಾಗಿದ್ದ ಓಮರ್ ಅಬ್ದುಲ್ಲಾ, ಸಿ.ಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರ ಹಿನ್ನೆಲೆಯಲ್ಲಿ ಹಾಗೂ ಸರ್ಕಾರ ರಚನೆಯಲ್ಲಿ ಪಕ್ಷಗಳು ವಿಫಲವಾದ ಕಾರಣ ರಾಜ್ಯಪಾಲ ಎನ್.ಎನ್ ವೋಹ್ರಾ ಕೇಂದ್ರ ಸರ್ಕಾರಕ್ಕೆ ವರದಿ ನೀಡಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಿದ್ದರು. ವರದಿಯನ್ನು ಸ್ವೀಕರಿಸಿದ ಕೇಂದ್ರ ಸರಕಾರ ಜ.9ರಂದು ರಾಜ್ಯಪಾಲರ ಆಳ್ವಿಕೆಯನ್ನು ಜಾರಿಗೊಳಿಸಿದೆ.
87 ವಿಧಾನಸಭಾ ಸ್ಥಾನಗಳಿರುವ ಜಮ್ಮು ಕಾಶ್ಮೀರದಲ್ಲಿ ಬಹುಮತಕ್ಕೆ 44 ಸದಸ್ಯರ ಬೆಂಬಲ ಬೇಕು. ಆದರೆ ಪಿಡಿಪಿ 28, ಬಿಜೆಪಿ 25, ಎನ್.ಸಿ 15, ಕಾಂಗ್ರೆಸ್ 12 ಮತ್ತು ಇತರರು 7 ಸ್ಥಾನಗಳನ್ನು ಗಳಿಸಿವೆ.
ಪಿಡಿಪಿ ಮತ್ತು ಬಿಜೆಪಿ ಪಕ್ಷಗಳು ಸೇರಿ ಮೈತ್ರಿ ಸರ್ಕಾರ ರಚಿಸುತ್ತದೆ ಎಂದು ಆರಂಭದಲ್ಲಿ ಸುದ್ದಿ ಇತ್ತು. ಆದರೆ ಸರಕಾರ ರಚನೆಯಲ್ಲಿ ಹೊಂದಾಣಿಕೆ ಇನ್ನೂ ಸಾಧ್ಯವಾಗಿಲ್ಲ. ಆದರೂ ಸರ್ಕಾರ ರಚನೆ ಕಸರತ್ತು ಮಾತ್ರ ಮುಂದುವರೆದಿದೆ.