ಬೆಂಗಳೂರು : ರಾಜ್ಯದ ಜನತೆಯ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಕುರಿತಂತೆ ಏಪ್ರಿಲ್ 11 ರಿಂದ ಮನೆ ಮನೆ ಸಮೀಕ್ಷೆ ಪ್ರಾರಂಭವಾಗುವುದರೊಂದಿಗೆ ಜಾತಿ ಗಣತಿಗೆ ಚಾಲನೆ ದೊರೆಯಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮೀಕ್ಷೆ ಕುರಿತ ಮಾರ್ಗಸೂಚಿ ಸಭೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಲಾಯಿತು.
ಸಮೀಕ್ಷಾ ಕಾರ್ಯವನ್ನು ಗಂಭೀರವಾಗಿ ಪರಿಗಣಿಸದೆ, ಮನೆ ಮನೆಗೆ ತೆರಳದೆಯೇ ಮರದಡಿಯಲ್ಲಿಯೇ ಕುಳಿತು ಅಂಕಿ-ಅಂಶಗಳನ್ನು ದಾಖಲಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ. ಗಣತಿದಾರರ ಎಲ್ಲಾ ಚಟುವಟಿಕೆಗಳನ್ನು ಹಿರಿಯ ಅಧಿಕಾರಿಗಳು ನಿಗಾವಹಿಸಲಿದ್ದಾರೆ. ಇದು ಅಂದಾಜು ಸಮೀಕ್ಷೆಯಲ್ಲ. ಅತ್ಯಂತ ವೈಜ್ಞಾನಿಕ ಹಾಗೂ ವಾಸ್ತವಿಕ ಸಮೀಕ್ಷೆಯಾಗಬೇಕೆಂಬುದು ಸರ್ಕಾರದ ಬಯಕೆ. ಈ ಸಮೀಕ್ಷೆಯು ಮುಂದಿನ ದಿನಗಳಲ್ಲಿ ಯೋಜನೆಗಳನ್ನು ರೂಪಿಸಲು ದಿಕ್ಸೂಚಿಯಾಗಲಿದೆ ಎಂದು ತಿಳಿಸಿದ್ದಾರೆ.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ರಂಗಗಳಲ್ಲಿ ಅಸಮಾನತೆ ತೊಲಗಿಸಿ ಎಲ್ಲರಿಗೂ ಸಮಾನ ಅವಕಾಶ ದೊರೆಯಬೇಕೆಂಬ ಭಾರತ ಸಂವಿಧಾನದಲ್ಲಿನ ಆಶಯಗಳನ್ನು ಸಾಕಾರಗೊಳಿಸಲು ರಾಜ್ಯ ಸರ್ಕಾರ ಐತಿಹಾಸಿಕ ಈ ಸಮೀಕ್ಷಾ ಕಾರ್ಯವನ್ನು ಕೈಗೆತ್ತಿಕೊಂಡಿದೆ.
ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗವು ಕೈಗೊಳ್ಳಲಿರುವ ಜಾತಿ ಗಣತಿಗೆ 175 ಕೋಟಿ ರೂ ತಗಲುವ ನಿರೀಕ್ಷೆ ಇದೆ. ಪ್ರಸಕ್ತ ಸಾಲಿನ ಪೂರಕ ಆಯವ್ಯಯದಲ್ಲಿ 84 ಕೋಟಿ ರೂ ಮೀಸಲಿರಿಸಲು ಉದ್ದೇಶಿಸಲಾಗಿದೆ. ಅಲ್ಲದೆ, 2015-16 ನೇ ಸಾಲಿನ ಆಯವ್ಯಯದಲ್ಲಿ 58 ಕೋಟಿ ರೂ ನಿಗದಿಪಡಿಸಲು ಯೋಜಿಸಲಾಗಿದೆ.ಈ ಹಿನ್ನೆಲೆಯಲ್ಲಿ, ವೇಳಾಪಟ್ಟಯಂತೆ ಈ ಗಣತಿ ಕಾರ್ಯ ಏಪ್ರಿಲ್ 30 ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.
ಈ ಸಮೀಕ್ಷಾ ಕಾರ್ಯವು ಜನವರಿ ಎರಡನೇ ವಾರದಲ್ಲಿ ಸಮೀಕ್ಷೆ ಕುರಿತಂತೆ ರಾಜ್ಯ ಮಟ್ಟದ ಕಾರ್ಯಾಗಾರ ಹಾಗೂ ಅಭಿಶಿಕ್ಷಣ ತರಬೇತಿ ನಡೆಯಲಿದೆ. ನಂತರ, ಜನವರಿ ಮೂರನೇ ವಾರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಾಗೂ ಫೆಬ್ರವರಿ ಮೊದಲನೇ ವಾರದಲ್ಲಿ ಮೇಲ್ವಿಚಾರಕರು ಹಾಗೂ ಗಣತಿದಾರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುವುದು.
ಅಂತೆಯೇ, ಫೆಬ್ರವರಿ ಎರಡನೇ ವಾರದಲ್ಲಿ ಗಣತಿ ಬ್ಲಾಕ್ಗೆ ಭೇಟಿ ನೀಡಿ, ಬ್ಲಾಕ್ನ ಗಡಿ ಗುರುತಿಸಿ, ಮನೆ ಮನೆ ಪಟ್ಟಿ ಸಿದ್ದಪಡಿಸಿ ಪ್ರಾಯೋಗಿಕವಾಗಿ ಕುಟುಂಬಗಳ ಅಣುಕು ಸಮೀಕ್ಷಾ ಕಾರ್ಯ ಪ್ರಾರಂಭವಾಗಲಿದೆ. ತದ ನಂತರ, ಏಪ್ರಿಲ್ 11 ರಿಂದ ಮನೆ ಮನೆ ಸಮೀಕ್ಷೆ ಪ್ರಾರಂಭವಾಗಲಿದೆ.ಪ್ರತಿ ಮನೆಗೂ ಭೇಟಿ ನೀಡುವ ಗಣತಿದಾರರು ಕುಟುಂಬದ ಎಲ್ಲಾ ಸದಸ್ಯರಿಗೆ ಸಂಬಂಧಿಸಿದಂತೆ 55 ಅಂಶಗಳುಳ್ಳ ಪ್ರಶ್ನಾವಳಿಗೆ ಮಾಹಿತಿ ಪಡೆಯುತ್ತಾರೆ. ಹೀಗೆ ಒಂದು ಮನೆಯ ಮಾಹಿತಿ ಸಂಗ್ರಹಿಸಲು ಸುಮಾರು 45 ನಿಮಿಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.