ಬೆಂಗಳೂರು : ಕಾಂಗ್ರೆಸ್ ಮುಕ್ತ ಕರ್ನಾಟಕ ಅಭಿಯಾನ ಆರಂಭಿಸುತ್ತಿದ್ದೇವೆ. ಇದಕ್ಕೆ ರೂಪುರೇಷೆ ಸಿದ್ಧಪಡಿಸಲೆಂದು ಆಗಮಿಸಿದ್ದೇನೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಬಿಹೆಪಿ ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷ ಬಲವರ್ಧನೆಗಾಗಿ ಸದಸ್ಯತ್ವ ಅಭಿಯಾನ ಆರಂಭಿಸಿದ್ದೇವೆ. ಕರ್ನಾಟಕದಲ್ಲಿ 1ಕೋಟಿ ಸದಸ್ಯತ್ವ ಗುರಿ ಹಾಗೂ ದೇಶಾದ್ಯತ 1೦ಕೋಟಿಗೂ ಅಧಿಕ ಸದಸ್ಯತ್ವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.
ಬೆಂಗಳೂರು ಚರ್ಚ್ ಸ್ಟ್ರೀಟ್ ನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೊಪಿಗಳ ಬಂಧನಕ್ಕೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಯತ್ನ ನಡೆಸಿದೆ ಎಂದು ಹೇಳಿದರು.
ದೇಶದಲ್ಲಿ ಬೆಲೆ ಇಳಿಕೆಗೆ ಹೆಚ್ಚಿನ ಗಮನ ಹರಿಸಲಾಗಿದೆ. ಹಣದುಬ್ಬರ ನಿಯಂತ್ರಣಕ್ಕೆ ನಮ್ಮ ಮೊದಲ ಆದ್ಯತೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕೇಂದ್ರದಿಂದ ಹಲವು ಜನಪರ ಯೋಜನೆಗಳು ಅನುಷ್ಠಾನಕ್ಕೆ ಬಂದಿದ್ದು, ಹಿಂದಿನ ಸರ್ಕಾರದ ಅವ್ಯವಸ್ಥೆಗಳನ್ನು ಸರಿಪಡಿಸಲಾಗುತ್ತಿದೆ. ಯುಪಿಎ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿತ್ತು. ಬಿಜೆಪಿ ಸರ್ಕಾರ ಬಂದ ಬಳಿಕ ಅಭಿವೃದ್ಧಿ ಕಾರ್ಯಗಳಿಗೆ ಸ್ಪಷ್ಟ ವೇಗ ದೊರೆತಿದೆ ಎಂದು ತಿಳಿಸಿದರು.
ದೇಶದಲ್ಲಿ ತೈಲ ಬೆಲೆ ಇಳಿಕೆಗೆ ವಿಶೇಷ ಒತ್ತು ನೀಡಲಾಗಿದೆ. ಕೆಲ ದಿನಗಳಿಂದ ಪೆಟ್ರೋಲ್, ಡೀಸೆಲ್ ದರದಲ್ಲಿ ಇಳಿಕೆ ಮಾಡಲಾಗಿದೆ. ಇದರಿಂದ ಕುಟುಂಬ ವೆಚ್ಚ ಕಡಿಮೆಯಾಗಿದೆ. ಇನ್ನು ಮೇಕ್ ಇನ್ ಇಂಡಿಯಾದಿಂದ ಉದ್ಯೋಗ ಸೃಷ್ಠಿಯಾಗಲಿದೆ. ನೀತಿ ಆಯೋಗದಿಂದ ಒಕ್ಕೂಟ ವ್ಯವಸ್ಥೆ ಬಲಗೊಳ್ಳುತ್ತದೆ. ಗಂಗಾ ನದಿ ಸ್ವಚ್ಛತೆ ಮೂಲಕ ದೇಶದ ಎಲ್ಲಾ ನದಿಗಳ ಸ್ವಚ್ಚತೆ ಮಾಡಲಾಗುತ್ತದೆ. ವಿದೇಶದಲ್ಲಿರುವ ಕಪ್ಪುಹಣ ತರಲು ಈಗಾಗಲೇ ಎಸ್ ಐಟಿ ರಚನೆ ಮಾಡಲಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಇಂತಹ ಅಭಿವೃದ್ಧಿ ಯತ್ನ ನಡೆದಿರಲಿಲ್ಲ ಎಂದರು.
ಲೋಕಸಭಾ ಚುನಾವನೆಯಲ್ಲಿ ಬಿಜೆಪಿಗೆ ಸ್ಪಷ್ಟ ಜನಾದೇಶ ಸಿಕ್ಕಿರುವುದು ನಮಗೆ ಖುಷಿ ತಂದಿದೆ. ಚುನಾವಣೆ ಬಳಿಕ ಮೊದಲಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದೇನೆ. ಬಿಜೆಪಿ ಗೆಲ್ಲಿಸಿದ್ದಕ್ಕೆ ರಾಜ್ಯದ ಜನತೆಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಹೊಸ ವರ್ಷದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಲಾಗಿತ್ತು. ಉಗ್ರರ ಈ ಯತ್ನ ವಿಫಲಗೊಳಿಸಲಾಗಿದೆ. ಇದಕ್ಕೆ ಕಾರಣರಾದ ಗುಪ್ತಚರ ಇಲಾಖೆ ಹಾಗೂ ಕೇಂದ್ರ ಸರ್ಕಾರಕ್ಕೆ ನನ್ನ ಅಭಿನಂದನೆ ಎಂದು ಹೇಳಿದರು.
ಇದೇ ವೇಳೆ ಭಾರತೀಯ ಹಿಂದೂ ಪರಿಷತ್ ಸಂಘಟನೆ ಸ್ಥಾಪನೆ ವಿಚಾರವಾಗಿ ಮಾತನಾಡಿದ ಶಾ, ಪ್ರತ್ಯೇಕ ಹಿಂದೂ ಪರಿಷತ್ ಸ್ಥಾಪಿಸಲು ಎಲ್ಲರಿಗೂ ಅಧಿಕಾರವಿದೆ. ಯಾವುದೇ ಧರ್ಮದವರು ಬೇಕಾದರೂ ಪ್ರತ್ಯೇಕ ಸಂಘಟನೆ ಸ್ಥಾಪಿಸಬಹುದು ಎಂದು ತಿಳಿಸಿದ್ದಾರೆ.