ಬೆಂಗಳೂರು : ಜಮ್ಮು-ಕಾಶ್ಮೀರ, ಜಾರ್ಖಂಡ್ ವಿಧಾನಸಭಾ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷಕ್ಕೆ ಎರಡೂ ರಾಜ್ಯಗಳಲ್ಲಿ ತೀವ್ರ ಹಿನ್ನಡೆಯುಂಟಾಗಿರುವುದು ನಿಜ, ಆದರೆ ನಾವು ಪಕ್ಷವನ್ನು ಸಂಘಟಿಸಿ ಮತ್ತೊಮ್ಮೆ ಎಲ್ಲಾ ರಾಜ್ಯಗಳಲ್ಲೂ ಅಧಿಕಾಕ್ಕೆ ಬರಲಿದ್ದೇವೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷಕ್ಕೆ ಪುಟಿದೇಳುವ ಸಾಮರ್ಥ್ಯವಿದ್ದು, ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಬಿಜೆಪಿ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿದ್ದು, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಅಲೆ ಇಲ್ಲ ಎಂಬುದು ಈ ಚುನಾವಣೆ ಮೂಲಕ ತಿಳಿಯುತ್ತದೆ ಎಂದಿದ್ದಾರೆ.
ಒಂದು ವೇಳೆ ಮೋದಿ ಅಲೆ ಇದ್ದಿದ್ದರೆ, ಎರಡೂ ರಾಜ್ಯಗಳಲ್ಲಿ ಕ್ಲೀನ್ ಸ್ವೀಪ್ ಮಾಡಬೇಕಿತ್ತು ಆದರೆ ಎರಡೂ ರಾಜ್ಯಗಳಲ್ಲಿ ಬಿಜೆಪಿಗೆ ಬಹುಮತ ದೊರೆತಿಲ್ಲ ಎಂದಿದ್ದಾರೆ. ಇದೇ ವೇಳೆ ಬಿಜೆಪಿಯವರು ಜಮ್ಮು-ಕಾಶ್ಮೀರಕ್ಕೆ ಬಿಜೆಪಿ ಮಿಷನ್-44 ಎಂದು ಹೊರಟಿದ್ದರು, ಆದರೆ ಈಗ ಮಿಷನ್-44ಕ್ಕೂ ಇಲ್ಲ, ವಿಷನ್-44 ಕ್ಕೂ ಇಲ್ಲ ಎಂದು ಬಿಜೆಪಿ ವಿರುದ್ಧ ಸಿ.ಎಂ ವ್ಯಂಗ್ಯವಾಡಿದ್ದಾರೆ.