ನವದೆಹಲಿ : 'ಕೇಂದ್ರ ಸರ್ಕಾರ'ದ ಮಹತ್ವಾಕಾಂಕ್ಷೆಯ ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ) ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಡಿ.19ರಂದು ಲೋಕಸಭೆಯಲ್ಲಿ ಮಂಡಿಸಿದ್ದಾರೆ.
ಕೇಂದ್ರ ಸರ್ಕಾರ ಮಂಡಿಸಿರುವ ಜಿ.ಎಸ್.ಟಿ ತಿದ್ದುಪಡಿ ಮಸೂದೆ ರಾಜ್ಯ ಹಾಗೂ ಕೇಂದ್ರಗಳಿಗೆ ಉಪಯುಕ್ತವಾಗಲಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. ಏಕರೂಪ ತೆರಿಗೆ ವ್ಯವಸ್ಥೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ಜಾರಿಗೆ ತರಲು ಉದ್ದೇಶಿಸಲಾಗಿರುವ ಜಿ.ಎಸ್.ಟಿ, ಇಡೀ ದೇಶವನ್ನು ಒಂದೇ ಮಾರುಕಟ್ಟೆಯಾಗಿ ಪರಿವರ್ತಿಸಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಡಿ.19ರಂದು ಮಂಡಿಸಿರುವ ಜಿ.ಎಸ್.ಟಿ ಮಸೂದೆ ತೆರಿಗೆ ವ್ಯವಸ್ಥೆಯಲ್ಲಿ ಏಕರೂಪತೆ ತರುವುದಷ್ಟೇ ಅಲ್ಲದೇ ಹೆಚ್ಚಿನ ಹೂಡಿಕೆ ಆಕರ್ಷಿಸಲೂ ಸಹಕಾರಿಯಾಗಲಿದೆ. ಸದ್ಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರಕುಗಳಿಗೆ ಮತ್ತು ಸೇವೆಗಳಿಗೆ ವಿಧಿಸುತ್ತಿರುವ ಎಲ್ಲ ರೀತಿಯ ಪರೋಕ್ಷ ತೆರಿಗೆಯ ಬದಲು ಏಕರೂಪದ ಈ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದೆ. ಇದೊಂದು ಸಮಗ್ರವಾದ ತೆರಿಗೆ ವ್ಯವಸ್ಥೆ ಆಗಿದ್ದು, ಬಹುತೇಕ ಎಲ್ಲ ಸರಕುಗಳು ಮತ್ತು ಸೇವೆಗಳು ಇದರ ವ್ಯಾಪ್ತಿಗೆ ಬರುತ್ತವೆ.
ಅರುಣ್ ಜೇಟ್ಲಿ ಮಂಡಿಸಿರುವ ಜಿ.ಎಸ್.ಟಿ ಮಸೂದೆಗೆ ತೃಣಮೂಲ ಕಾಂಗ್ರೆಸ್ ಸಂಸದರೂ ಸಹ ಲೋಕಸಭೆಯಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ. 2011ರಲ್ಲಿ ಯುಪಿಎ ಸರ್ಕಾರ ಜಿ.ಎಸ್.ಟಿ ಮಸೂದೆಯನ್ನು ಮಂಡಿಸಿತ್ತಾದರೂ ಆ ಮಸೂದೆ ರದ್ದುಗೊಂಡಿದ್ದರ ಪರಿಣಾಮ ಈಗ ಎನ್.ಡಿ.ಎ ಸರ್ಕಾರ ನೂತನ ಜಿ.ಎಸ್.ಟಿ ಮಸೂದೆ ಜಾರಿಗೆ ತರಲಿದೆ. ಏಪ್ರಿಲ್.1, 2006ರಿಂದ ದೇಶಾದ್ಯಂತ ಜಿ.ಎಸ್.ಟಿ ಜಾರಿಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.