ನವದೆಹಲಿ : 'ಮುಂಬೈ ದಾಳಿ'ಯ ಆರೋಪಿ ಲಷ್ಕರ್-ಎ-ತೊಯ್ಬಾ ಕಮಾಂಡರ್ ಜಾಕೀರ್ ರೆಹಮಾನ್ ಲಖ್ವಿಗೆ ಪಾಕಿಸ್ತಾನ ಕೋರ್ಟ್ ಜಾಮೀನು ಮಂಜೂರು ಮಾಡಿರುವುದಕ್ಕೆ ಭಾರತ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಉಗ್ರ ಲಖ್ವಿಯನ್ನು ಜಾಮೀನು ಆಧಾರದಲ್ಲಿ ಬಿಡುಗಡೆ ಮಾಡಿರುವುದರಿಂದ ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಹೋರಾಡುವುದಾಗಿ ನೀಡಿದ್ದ ಹೇಳಿಕೆ ಅಪಹಾಸ್ಯಕ್ಕೆ ಗುರಿಯಾಗಿದೆ ಎಂದು ಭಾರತ ಸರ್ಕಾರ ಕಳವಳ ವ್ಯಕ್ತಪಡಿಸಿದೆ.
ಮುಂಬೈ ದಾಳಿಯ ಉಗ್ರರಿಗೆ ಶಿಕ್ಷೆ ವಿಧಿಸುವ ಸಂಬಂಧ ಪಾಕಿಸ್ತಾನ ಭಾರತಕ್ಕೆ ಭರವಸೆ ನೀಡಿತ್ತಾದರೂ ಕಾನೂನು ಹಾಗೂ ಪ್ರಕರಣದ ವಿಚಾರಣೆ ನಡೆಸುತ್ತಿರುವವರು ಮುಂಬೈ ದಾಳಿಯ ಉಗ್ರರನ್ನು ರಕ್ಷಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ಭಾರತ ಆರೋಪಿಸಿದೆ.
ಈ ಬಗ್ಗೆ ಪಾಕಿಸ್ತಾನದೊಂದಿಗೆ ಚರ್ಚಿಸಲಾಗಿದ್ದು ಲಖ್ವಿಗೆ ಜಾಮೀನು ನೀಡಿರುವ ಬೆಳವಣಿಗೆ, ಭಯೋತ್ಪಾದನೆ ವಿರುದ್ಧ ಹೋರಾಡುತ್ತೇವೆ ಎಂಬ ಪಾಕಿಸ್ತಾನದ ಹೇಳಿಕೆ ಅಪಹಾಸ್ಯಕ್ಕೀಡಾಗಲಿದೆ ಎಂದು ಎಚ್ಚರಿಸಿದ್ದೇವೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಸಯ್ಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.
ಡಿ18ರಂದು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕೋರ್ಟ್, ಮುಂಬೈ ದಾಳಿಯ ರುವಾರಿಗಳಲ್ಲೊಬ್ಬನಾದ ಲಷ್ಕರ್ -ಎ-ತೊಯ್ಬಾ ಉಗ್ರ ಜಾಕೀರ್ ರೆಹಮಾನ್ ಲಖ್ವಿಗೆ ಜಾಮೀನು ಮಂಜೂರು ಮಾಡಿತ್ತು. ಪೇಶಾವರದಲ್ಲಿ ಶಾಲೆ ಮೇಲೆ ಉಗ್ರರ ದಾಳಿ ನಡೆದ ಬೆನ್ನಲ್ಲೇ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕೋರ್ಟ್ ಉಗ್ರರಿಗೆ ಜಾಮೀನು ನೀಡಿರುವುದು ತೀವ್ರ ಆಕ್ಷೇಪಕ್ಕೆ ಗುರಿಯಾಗಿದೆ.