ಇಸ್ಲಾಮಾಬಾದ್ : ಒಂದೆಡೆ ಮುಂಬೈ ದಾಳಿ ರುವಾರಿಗಳಾದ ಪಾಕ್ ಉಗ್ರರನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಭಾರತ ಸರ್ಕಾರ ಒತ್ತಾಯಿಸುತ್ತಿದ್ದರೆ ಮತ್ತೊಂದೆಡೆ ಅದೇ ಪ್ರಕರಣದ ಆರೋಪಿಗಳು ಪಾಕಿಸ್ತಾನದ ಕೋರ್ಟ್ ನಿಂದ ಜಾಮೀನು ಪಡೆಯುತ್ತಿದ್ದಾರೆ!
ಡಿ18ರಂದು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕೋರ್ಟ್, ಮುಂಬೈ ದಾಳಿಯ ರುವಾರಿಗಳಲ್ಲೊಬ್ಬನಾದ ಲಷ್ಕರ್ -ಎ-ತೊಯ್ಬಾ ಉಗ್ರ ಜಾಕೀರ್ ರೆಹಮಾನ್ ಲಖ್ವಿಗೆ ಜಾಮೀನು ಮಂಜೂರು ಮಾಡಿದೆ ಎಂದು ಟಿವಿ ಮಾಧ್ಯಮಗಳು ವರದಿ ಮಾಡಿವೆ. 5 ಲಕ್ಷ ರೂಪಾಯಿ ಶೂರಿಟಿ ನೀಡುವಂತೆ ಲಖ್ವಿಗೆ ಕೋರ್ಟ್ ಸೂಚನೆ ನೀಡಿದೆ.
ಮುಂಬೈ ದಾಳಿ ಪ್ರಕರಣದಲ್ಲಿ ಒಟ್ಟು 7 ಉಗ್ರರು ವಿಚಾರಣೆ ಎದುರಿಸುತ್ತಿದ್ದಾರೆ. ಈ ಪೈಕಿ ಲಷ್ಕರ್-ಎ-ತೋಯ್ಬಾ ಕಮಾಂಡರ್ ಜಾಕೀರ್ ರೆಹಮಾನ್ ಲಖ್ವಿ ಕೂಡಾ ಒಬ್ಬ.
ಜಾಕೀರ್ ರೆಹಮಾನ್ ಲಖ್ವಿ, ಅಬ್ದುಲ್ ವಾಜಿದ್, ಮಝಾರ್ ಇಕ್ಬಾಲ್, ಸಾದಿಕ್, ಶಾಹಿದ್ ಜಮೀಲ್ ರಿಯಾಜ್, ಜಮೀಲ್ ಅಹ್ಮದ್ ಮತ್ತು ಯೌನಸ್ ಅಂಜುಂ ವಿರುದ್ಧ ಮುಂಬೈ ನ 26/11 ದಾಳಿಯ ರೂಪುರೇಷೆ ಸಿದ್ಧಪಡಿಸಿರುವುದು, ದಾಳಿಗೆ ಅಗತ್ಯವಿರುವ ಹಣ ವರ್ಗಾವಣೆ, ದಾಳಿ ನಡೆಸಿರುವ ಆರೋಪ ಹೊರಿಸಲಾಗಿದೆ.
ಮುಂಬೈ ದಾಳಿಯ ವಿಚಾರಣೆಯಲ್ಲಿ ಪಾಕಿಸ್ತಾನ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಭಾರತ ಸರ್ಕಾರ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದೆ. ಆದರೆ ಪಾಕಿಸ್ತಾನ ಮಾತ್ರ ಯಾವುದೇ ಉಗ್ರರಿಗೂ ಶಿಕ್ಷೆ ವಿಧಿಸಿರಲಿಲ್ಲ. ಇದೀಗ ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಉಗ್ರನಿಗೆ ಪಾಕ್ ಕೋರ್ಟ್ ಜಾಮೀನು ನೀಡಿದೆ.