ಬೆಳಗಾವಿ : ಜೆಡಿಎಸ್ ಭಿನ್ನಮತ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲೂ ಸ್ಫೋಟಗೊಂಡಿದ್ದು, ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೇಸಾಬೀತಾಗಿದೆ. ಅಧಿವೇಶನ ಪ್ರಾರಂಭವಾಗಿ ನಾಲ್ಕು ದಿನವಾಗಿದ್ದರೂ ಕೆಲ ಶಾಸಕರು ಈ ವರೆಗೂ ಬೆಳಗಾವಿಯತ್ತ ಮುಖಮಾಡಿಲ್ಲ. ಇನ್ನು ಕೆಲವರು ಭಾಗವಹಿಸಿದ್ದರೂ ಪಕ್ಷಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಮೌನವಹಿಸಿದ್ದಾರೆ.
ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಹಾಗೂ ಶಾಸಕರ ನಡುವಿನ ಸಂಬಂಧ ಹಳಸಿರುವುದು ಇದರಿಂದ ಸ್ಪಷ್ಟವಾಗಿದ್ದು , ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮ ಬೀರುವ ಮುನ್ಸೂಚನೆ ಮೂಡಿಸುತ್ತಿದೆ. ಬೆಳಗಾವಿ ಅಧಿವೇಶನ ಪ್ರಾರಂಭವಾಗುವ ಮುನ್ನವೇ ಎಲ್ಲಾ ಶಾಸಕರು ಮತ್ತು ವಿಧಾನಪರಿಷತ್
ಸದಸ್ಯರು ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಸೂಚಿಸಲಾಗಿತ್ತು. ಇದಕ್ಕಾಗಿಯೇ ಹೆಚ್.ಡಿ.ಕುಮಾರಸ್ವಾಮಿ ಅವರೇ ಶಾಸಕಾಂಗ ಸಭೆ ನಡೆಸಿದ್ದರು.
ಆದರೆ ಡಿ.9ರಿಂದ ಪ್ರಾರಂಭವಾಗಿ ನಾಲ್ಕು ಕಲಾಪ ನಡೆದರೂ ಕೆಲ ಶಾಸಕರು ಸುವರ್ಣಸೌಧದತ್ತ ಮುಖವನ್ನೇ ಮಾಡಿಲ್ಲ. ಕುಂಟು ನೆಪ ಹೇಳಿ ತಮ್ಮ ತಮ್ಮ ಕ್ಷೇತ್ರಗಳಲ್ಲೇ ಠಿಕಾಣಿ ಹೂಡಿದ್ದಾರೆ. ಇನ್ನು ಕೆಲವರು ಬಂದಿದ್ದರೂ ಸದನದಲ್ಲಿ ಬಾಯಿ ತೆಗೆಯಲು ಮೀನಾಮೇಷ ಎಣಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಶಾಸಕರಾದ ಜಮೀರ್ ಆಹಮ್ಮದ್, ಹೆಚ್.ಸಿ.ಬಾಲಕೃಷ್ಣ , ಇಕ್ಬಾಲ್ ಅನ್ಸಾರಿ ಸೇರಿದಂತೆ ಮತ್ತಿತರ ಶಾಸಕರು ಅಧಿವೇಶನದಲ್ಲಿ ಭಾಗವಹಿಸಿಲ್ಲ. ಬಾಲಕೃಷ್ಣ ಅವರು ಬೆಳಗಾವಿಗೆ ಬಂದಿದ್ದರೂ ಆನಾರೋಗ್ಯದ ನೆಪ ಹೇಳಿ ಗೈರು ಹಾಜರಾದರು. ಇನ್ನು ಕೆಲವರು ಸದನದ ಕಲಾಪದಲ್ಲಿ ಭಾಗವಹಿಸಿದರೂ ಬಾಯಿ ಬಿಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಭಾಗವಹಿಸಿದ್ದೆ ಸಾಧನೆ ಎಂಬಂತಾಗಿದೆ.
ಶಾಸಕರಾದ ಚಲುವರಾಯಸ್ವಾಮಿ, ಕೋನರೆಡ್ಡಿ, ವೈ.ಎಸ್.ವಿ ದತ್ತ, ರೇವಣ್ಣ ಸೇರಿದಂತೆ ಬೆರಳಿಣಿಕೆಯಷ್ಟುಜನ ಮಾತ್ರ ಕಲಾಪದಲ್ಲಿ ಪಾಲ್ಗೊಂಡಿದ್ದಾರೆ. ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಕುಮಾರಸ್ವಾಮಿ ಮಾತನಾಡುವಾಗ ಸದನದಲ್ಲಿ ಕೆಲವೇ ಕೆಲವು ಶಾಸಕರು ಹಾಜರಿದ್ದರು. ಸರ್ಕಾರದ ತಪ್ಪುಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟ ವೇಳೆ ಅವರ ಬೆಂಬಲಕ್ಕೆ ನಿಲ್ಲಬೇಕಿದ್ದ ಶಾಸಕರು ಸದನದ ಹೊರಗಡೆ ಹರಟೆ ಹೊಡೆಯುತ್ತಿದ್ದ ದೃಶ್ಯ ಕಂಡು ಬಂತು. ಇದು ಪಕ್ಷ ನಾಲ್ಕು ದಿಕ್ಕಾಗಿರುವುದನ್ನು ಸಾರಿ ಹೇಳುವಂತಿತ್ತು.