ಬೆಳಗಾವಿ : ಬಿಜೆಪಿ ಶಾಸಕ ಪ್ರಭು ಚೌಹಾಣ್ ಮೊಬೈಲ್ನಲ್ಲಿ ಫೋಟೊ ವೀಕ್ಷಿಸಿದ ಪ್ರಕರಣ ಸದನದಲ್ಲಿ ಮಾರ್ಧನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ಕದನಕ್ಕೆ ಕಾರಣವಾಗಿ, ಕೋಲಾಹಲ ಉಂಟಾದ ಪರಿಣಾಮ ಸದನವನ್ನು ಕೆಲ ಕಾಲ ಮುಂದೂಡಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಕಲಾಪ ಪ್ರಾರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ಪ್ರಭು ಚೌಹಾಣ್ ಮೊಬೈಲ್ನಲ್ಲಿ ಫೋಟೊ ವೀಕ್ಷಣೆ ಪ್ರಕರಣವನ್ನು ಪ್ರಸ್ತಾಪಿಸಿ ಬಿಜೆಪಿ ವಿರುದ್ದ ಘೋಷಣೆಗಳನ್ನು ಕೂಗಿ, ಶಾಸಕ ಪ್ರಭು ಚೌಹಾಣ್ ವಿರುದ್ದ ಕ್ರಮಕೈಗೊಳ್ಳುವಂತೆ ಸ್ಪೀಕರ್ ಕಾಗೋಡು ತಿಮ್ಮಪ್ಪಗೆ ಆಗ್ರಹಿಸಿದರು. ಇದರಿಂದ ಗದ್ದಲ-ಕೋಲಾಹಲ ನಡೆದ ಹಿನ್ನಲೆಯಲ್ಲಿ ಕೆಲ ಕಾಲ ಕಲಾಪವನ್ನು ಮುಂದುದಲಾಯಿತು.
ಫೋಟೋ ವೀಕ್ಷಣೆ ಪ್ರಕರಣ ಹಿನ್ನಲೆಯಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಕೊಠಡಿಯಲ್ಲಿ ಸಂಧಾನ ಸಭೆ ನಡೆಸಲಾಯಿತು. ಸಭೆಯಲ್ಲಿ ಕಾಂಗ್ರೆಸ್,ಬಿಜೆಪಿ, ಜೆಡಿಎಸ್ ಶಾಸಕರು ಪಾಲ್ಗೊಂಡಿದ್ದರು. ಸಭೆಯಲ್ಲಿ ಕಾಂಗ್ರೆಸ್ ಶಾಸಕರು, ಪ್ರಭು ಚೌಹಾಣ್ ಅವರನ್ನು ಕಲಾಪದಿಂದ ಬಹಿಷ್ಕರಿಸಬೇಕು. ಚೌಹಾಣ್ ವಿರುದ್ಧ ಸ್ಪೀಕರ್ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ವೇಳೆ ಬಿಜೆಪಿ ಶಾಸಕ ಸಿ.ಟಿ.ರವಿಯವರು, ಚೌಹಾಣ್ ಅವರನ್ನು ಕಲಾಪದಿಂದ ಬಹಿಷ್ಕರಿಸುವುದಾದರೆ ಕಾಂಗ್ರೆಸ್ ಶಾಸಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಸಚಿವೆ ಉಮಾಶ್ರೀ ಸಿ.ಟಿ.ರವಿ ಹೇಳಿಕೆಗೆ ವಾಗ್ದಾಳಿ ನಡೆಸಿದರು. ಒಂದು ಹಂತದಲ್ಲಿ ಸಂಧಾನ ಸಭೆ ಕೂದ ಉಭಯ ಪಕ್ಷಗಳ ನಡುವೆ ಕೋಲಾಹಲಕ್ಕೆ ಕಾರಣವಾಯಿತು.