ನವದೆಹಲಿ : ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಪ್ರೊ.ಎಸ್.ಎಲ್ ಭೈರಪ್ಪ ಅವರನ್ನು ರಾಷ್ಟ್ರೀಯ ಪ್ರಾಧ್ಯಾಪಕರೆಂದು ಘೋಷಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ರಾಷ್ಟ್ರೀಯ ಪ್ರಾಧ್ಯಾಪಕರ ಗೌರವಕ್ಕೆ ಪಾತ್ರರಾಗಲಿರುವ ಮೊದಲ ಕನ್ನಡಿಗ ಭೈರಪ್ಪ ಅವರು ಎಂಬುದು ವಿಶೇಷ.
ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಲೋಕಸಭೆಯಲ್ಲಿ ಈ ವಿಷಯ ಪ್ರಕಟಿಸಿದ್ದಾರೆ. ಭಾಷೆಗಳ ರಕ್ಷಣೆ ವಿಚಾರದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವ ಸಂದರ್ಭದಲ್ಲಿ ಈ ವಿಷಯ ತಿಳಿಸಿರುವ ಸಚಿವೆ, ಸೃಜನ ಸಾಹಿತ್ಯದ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಪ್ರೊ.ಎಸ್.ಎಲ್ ಭೈರಪ್ಪ ಅವರ ಅನುಭವ, ಜ್ನಾನವನ್ನು ರಾಷ್ಟ್ರಮಟ್ಟದಲ್ಲಿ ಬಳಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ದೇಶದ ಯಾವುದೇ ಭಾಷೆಯ ಸಾಹಿತ್ಯ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದವರನ್ನು ಗುರುತಿಸಿ ಕೇಂದ್ರ ಸರ್ಕಾರ ರಾಷ್ಟ್ರೀಯ ಪ್ರಾಧ್ಯಾಪಕ ಎಂಬ ಗೌರವ ನೀಡುತ್ತದೆ. ಈ ವರೆಗೂ ಕರ್ನಾಟಕದ ಯಾವುದೇ ವಿದ್ವಾಂಸರಿಗೆ ಈ ಗೌರವ ದೊರೆತಿರಲಿಲ್ಲ.