ಕೇರಳ : 'ಕಾಂಗ್ರೆಸ್' ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು ಪ್ರಧಾನಿ ನರೇಂದ್ರ ಮೋದಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಡಿ.10ರಂದು ಕೇರಳಕ್ಕೆ ಭೇಟಿ ನೀಡಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಬಿಜೆಪಿಯದ್ದೂ ಸೇರಿದಂತೆ ಹಿಂದಿನ ಯಾವುದೇ ಸರ್ಕಾರಕ್ಕಿಂತ ಇಂದಿನ ಸರ್ಕಾರ ಭಿನ್ನವಾಗಿದ್ದು ಸಮಸ್ತ ಅಧಿಕಾರವೂ ಒಬ್ಬ ವ್ಯಕ್ತಿಯ ಕೈಲಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿಯಲ್ಲಿ ಮೋದಿ ಮಾತ್ರ ಮಾತನಾಡುತ್ತಾರೆ. ಮೋದಿ ಮಾತ್ರವೇ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಕೇಂದ್ರದಲ್ಲಿರುವುದು ಬಿಜೆಪಿ ಸರ್ಕಾರವಲ್ಲ ಬದಲಾಗಿ ಮೋದಿ ಸರ್ಕಾರ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಈ ಹಿಂದೆಯೂ ಕಾಂಗ್ರೆಸ್ಸೇತರ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ಬಿಜೆಪಿಯವರೇ ಆದ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಇದ್ದ ಪರಿಸ್ಥಿತಿಗಿಂತಲೂ ಇಂದಿನ ಪರಿಸ್ಥಿತಿ ಭಿನ್ನವಾಗಿತ್ತು. ವಿರೋಧಪಕ್ಷಗಳೊಂದಿಗೆ ವಾಜಪೇಯಿ ಅವರಿಗೆ ಸೈದ್ಧಾಂತಿಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಇತ್ತಾದರೂ ವಿಪಕ್ಷಗಳ ಸಲಹೆಯನ್ನು ತಾಳ್ಮೆಯಿಂದ ಕೇಳುತ್ತಿದ್ದರು. ಆದರೆ ಈಗ ಸಂಸತ್ ನಲ್ಲಿ ಯಾರೂ ತುಟಿಬಿಚ್ಚದ ವಾತಾವರಣ ನಿರ್ಮಾಣವಾಗಿದೆ ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯುಪಿಎ ಸರ್ಕಾರ ಕೈಗೊಂಡಿದ್ದ ಹಲವು ಜನಪರ ಕಾರ್ಯಗಳನ್ನು ಕಳೆದ 6 ತಿಂಗಳಿನಿಂದ ಬದಿಗಿಡಲಾಗಿದೆ. ಎನ್.ಡಿ.ಎ ಸರ್ಕಾರ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇರಳದಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ರಾಹುಲ್ ಗಾಂಧಿ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.