ನವದೆಹಲಿ : 4 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಅಕ್ರಮ ಆಸ್ತಿ ಪ್ರಕರಣದಲ್ಲಿ ಜಾಮೀನು ನೀಡಲು ತಾವು 1000 ಕೋಟಿ ರೂ. ಲಂಚ ಪಡೆದಿದ್ದಾಗಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಎಚ್.ಎಲ್.ದತ್ತು ತಳ್ಳಿಹಾಕಿದ್ದಾರೆ.
ಕೆಲವರು ನಾನು 1000 ಕೋಟಿ ರೂ. ಲಂಚ ಪಡೆದೆ ಎನ್ನುತ್ತಾರೆ. ಚಿಂತೆ ಬೇಡ. ಈ ಆರೋಪವನ್ನು ನಾನು ನಿಭಾಯಿಸುತ್ತೇನೆ. ನನ್ನ ಚರ್ಮ ದಪ್ಪಗಿದೆ. ಇಂಥ ಆರೋಪಗಳು ನನಗೆ ನಾಟುವುದಿಲ್ಲ ಎಂದು ದತ್ತು ಹೇಳಿದ್ದಾರೆ.
ದತ್ತು ಲಂಚ ಪಡೆದಿದ್ದಾರೆಂದು ಮಾಧ್ಯಮವೊಂದರಲ್ಲಿ ವರದಿ ಪ್ರಕಟವಾಗಿತ್ತು. ಈ ಆರೋಪದ ಹಿನ್ನೆಲೆಯಲ್ಲಿ, ಆ ಮಾಧ್ಯಮದ ವಿರುದ್ಧ ಮಾನನಷ್ಟ ದಾವೆ ಹೂಡಬೇಕು. ಮಾಧ್ಯಮ ವರದಿಯು ಭಾರತದ ಮುಖ್ಯ ನ್ಯಾಯಾಧೀಶರಿಗೆ ಕಳಂಕ ತಂದಿದೆ ಎಂದು ತಮಿಳುನಾಡಿನ ವಕೀಲ ಆರ್.ಕೃಷ್ಣಮೂರ್ತಿ ಎಂಬುವರು ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ವಜಾಗೊಳಿಸಿದ ನ್ಯಾ.ದತ್ತು, ಈ ಮೇಲಿನಂತೆ 'ಇಂಥ ಆರೋಪಗಳನ್ನು ನಾನೇ ನಿಭಾಯಿಸುವೆ' ಎಂದು ಹೇಳಿದರು.
ನಾನೊಬ್ಬ ಕನ್ನಡಿಗ. ಜಾಮೀನು ನೀಡಿದ್ದಕ್ಕೆ ನನ್ನ ಮೇಲೆ ಈಗ ಟೀಕೆಗಳು ಕೇಳಿ ಬರುತ್ತಿವೆ. ಇದೇ ಕರ್ನಾಟಕ ಹೈಕೋರ್ಟ್ ಜಯಾಗೆ ಜಾಮೀನು ನಿರಾಕರಿಸಿದಾಗ, ಕನ್ನಡಿಗರು ನ್ಯಾಯಾಧೀಶರಾಗಿದ್ದರಿಂದ ಜಾಮೀನು ನಿರಾಕರಿಸಲಾಯಿತು ಎಂದು ಮಾಧ್ಯಮಗಳಲ್ಲಿ ವ್ಯಂಗ್ಯಚಿತ್ರ ಪ್ರಕಟವಾದ ಬಗ್ಗೆಯೂ ಕೇಳಿದ್ದೇನೆ ಎಂದು ದತ್ತು ತಿಳಿಸಿದ್ದಾರೆ.