ಜಮ್ಮು-ಕಾಶ್ಮೀರ : 'ಜಮ್ಮು-ಕಾಶ್ಮೀರ'ದಲ್ಲಿ ಚುನಾವಣಾ ರ್ಯಾಲಿಗಳಿಗೆ ಬಿಜೆಪಿಯವರೇ ಜನರನ್ನು ಕರೆತರುತ್ತಾರೆ ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹೇಳಿದ್ದಾರೆ.
ಟ್ವಿಟರ್ ನಲ್ಲಿ ಬಿಜೆಪಿ ವಿರುದ್ಧ ಬರೆದಿರುವ ಓಮರ್ ಅಬ್ದುಲ್ಲಾ, ಡಿ.8ರಂದು ನಡೆದ ನರೇಂದ್ರ ಮೋದಿ ಚುನಾವಣಾ ರ್ಯಾಲಿಗೆ 2 ಟ್ರೈನ್ ಲೋಡ್ ಗಳಷ್ಟು ಜನರನ್ನು ಕರೆತರಲಾಗಿತ್ತು ಎಂದು ಆರೋಪಿಸಿದ್ದಾರೆ. ಅಲ್ಲದೇ ರ್ಯಾಲಿಗೆ ಬಂದ ಯಾವುದೇ ವ್ಯಕ್ತಿಯ ಕೈಯಲ್ಲಾಗಲೀ ವಾಹನದ ಮೇಲಾಗಲೀ ಬಿಜೆಪಿಯ ಧ್ವಜ ಅಥವಾ ಬ್ಯಾನರ್ ಕಂಡುಬಂದಿಲ್ಲ ಎಂದು ಓಮರ್ ಅಬ್ದುಲ್ಲಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನ ಕೆಲ ನಾಯಕರೂ ಕೂಡ ಬಿಜೆಪಿಗೆ ಸಹಾಯ ಮಾಡುತ್ತಿದೆ ಎಂದು ಆರೋಪಿಸಿರುವ ಓಮರ್, ಆಚ್ಚರಿಯೆಂದರೆ ಹೆಚ್ಚಿನ ಜನರನ್ನು ಕರೆತರುವಂತೆ ಬಿಜೆಪಿ ಕಾಂಗ್ರೆಸ್ ನ ಕೆಲ ನಾಯಕರಿಗೆ ಮನವಿ ಮಾಡಿದೆ ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರ ರ್ಯಾಲಿಗೆ ಅತಿ ಹೆಚ್ಚು ಜನರು ಆಗಮಿಸಿದ್ದಾರೆ ಎಂದು ಓಮರ್ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ವಿದೇಶ ಪ್ರವಾಸದಲ್ಲಿದ್ದ ಮೋದಿಗೆ ಅನಿವಾಸಿ ಭಾರತೀಯರು ಭವ್ಯ ಸ್ವಾಗತ ಕೋರಿದ್ದರ ಬಗ್ಗೆ ಪ್ರತಿಕ್ರಿಯಿಸಿದ್ದ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್, ಮೋದಿ ವಿದೇಶಕ್ಕೆ ತೆರಳುವಾಗ ತಮ್ಮೊಂದಿಗೆ ಜನರನ್ನೂ ಕರೆದೊಯ್ಯುತ್ತಾರೆ. ಆದ್ದರಿಂದ ಅವರ ಸಭೆಗಳಲ್ಲಿ ಹೆಚ್ಚಿನ ಜನರು ಭಾಗವಹಿಸುತ್ತಾರೆ ಎಂದು ಹೇಳುವ ಮೂಲಕ ವ್ಯಾಪಕ ಟೀಕೆಗೊಳಗಾಗಿದ್ದರು. ಇದೀಗ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಸರದಿ.