ನವದೆಹಲಿ : ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಹತ್ತಿರವಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್, ಆನ್ಲೈನ್ ಮೂಲಕವೇ ತಿರುಗೇಟು ನೀಡಿದೆ. ಮೋದಿ ಸರ್ಕಾರದ ಆಡಳಿತದ ಬಗ್ಗೆ ಗಮನ ಹರಿಸಲು ಇತ್ತೀಚೆಗಷ್ಟೇ ಕಣ್ಗಾವಲು ಸಮಿತಿ ರಚಿಸಿದ್ದ ಕಾಂಗ್ರೆಸ್, ಟ್ವೀಟರ್ ಮೂಲಕ, ಸರಣಿ ದಾಳಿ ಮುಂದುವರೆಸಿದೆ.
ಕಾಶ್ಮೀರದಲ್ಲಿ ಸೇನಾ ಶಿಬಿರದ ಮೇಲೆ ನಡೆದ ಉಗ್ರರ ದಾಳಿ, ಪಂಜಾಬ್ನಲ್ಲಿ ಜನರನ್ನು ಅಂಧರನ್ನಾಗಿಸಿದ ನೇತ್ರ ತಪಾಸಣಾ ಶಿಬಿರ, ರೈಲ್ವೆ ಅಪಘಾತ, ಐಐಟಿಯಲ್ಲಿ ಸಿಬ್ಬಂದಿಗಳ ಕೊರತೆ, ಮೋದಿ ಕನಸಿನ ಯೋಜನೆ ಜಾರಿಗೆ ಪರಿಸರ ನಿಯಮ ಉಲ್ಲಂಘನೆ ಸೇರಿದಂತೆ ಹಲವು ವಿಷಯಗಳನ್ನು ಆಧರಿಸಿ ಕಣ್ಗಾವಲು ಸಮಿತಿ ಟ್ವೀಟ್ ಮಾಡಿದೆ.
ಸರಣಿ ಟ್ವೀಟ್ಗಳ ಮೂಲಕವೇ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮುಟ್ಟಿಸುವ ಯತ್ನವನ್ನು ಕಾಂಗ್ರೆಸ್ ನಡೆಸಿದೆ.
ಕಾಂಗ್ರೆಸ್ ಟ್ವೀಟ್ ಹೀಗಿದೆ.......
*ಕೇಂದ್ರ ಆರೋಗ್ಯ ಇಲಾಖೆ ಕಣ್ಗಾವಲು: ಒಬ್ಬರು ವೈದ್ಯರಿಂದ 49 ಶಸ್ತ್ರಚಿಕಿತ್ಸೆ ಪರಿಣಾಮ ಪಂಜಾಬ್ನಲ್ಲಿ ಕಣ್ಣು ಶಸ್ತ್ರಚಿಕಿತ್ಸೆಯಲ್ಲಿ ಕಣ್ಣೇ ಹೋಯ್ತು.
*ಕೇಂದ್ರ ರಕ್ಷಣಾ ಸಚಿವಾಲಯ ಕಣ್ಗಾವಲು: ಉರಿ ಭಯೋತ್ಪಾದಕ ದಾಳಿಯಲ್ಲಿ ಜೀವತೆತ್ತ 8 ಯೋಧರು.
*ಮಾನವ ಸಂಪನ್ಮೂಲ ಸಚಿವಾಲಯದ ಕಣ್ಗಾವಲು: ಐಐಟಿಯಲ್ಲಿ ಶೇ.37ರಷ್ಟು ಬೋಧಕ ವರ್ಗದ ಕೊರತೆ
*ರೈಲ್ವೇ ಇಲಾಖೆ ಕಣ್ಗಾವಲು : ಉತ್ತರಪ್ರದೇಶದಲ್ಲಿ ರೈಲು ಅಪಘಾತದಲ್ಲಿ ಇಬ್ಬರು ಮಕ್ಕಳ ಬಲಿ
*ಪರಿಸರ ಇಲಾಖೆ ಕಣ್ಗಾವಲು: ಅಭಿವೃದ್ಧಿ ಹೆಸರಲ್ಲಿ ಪರಿಸರ ನಿಯಮಗಳನ್ನು ಗಾಳಿಗೆ ತೂರಿದ ಮೋದಿ! ಈ ಅಭಿವೃದ್ಧಿಗೆ ಎಷ್ಟು ವೆಚ್ಚ?
*ಮಹಿಳಾ ಮತ್ತು ಕಲ್ಯಾಣ ಇಲಾಖೆ ಕಣ್ಗಾವಲು: ಬಿಲ್ಸಾಪುರದಲ್ಲಿ 11 ನವಜಾತ ಶಿಶುಗಳ ಸಾವು!