ನವದೆಹಲಿ : ಕೇಂದ್ರ ಸಚಿವೆ ಸಾದ್ವಿ ನಿರಂಜನ್ ಜ್ಯೋತಿ ವಿರುದ್ಧ ರಾಜ್ಯಸಭೆಯಲ್ಲಿ ಪ್ರತಿಭಟನೆ ಉಂಟಾಗಿದ್ದು, ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಗಿದೆ.
ದೆಹಲಿಯಲ್ಲಿ ಚುನಾವಣಾ ಪ್ರಚಾರ ನಡೆಸುವ ವೇಳೆ ಕೇಂದ್ರ ಸಚಿವೆ ಸಾದ್ವಿ ನಿರಂಜನ್ ಜ್ಯೋತಿ ಅವರು ವಿವಾದಾತ್ಮಕ ಹೇಳಿಕೆ ನೀಡಿ ವಿರೋಧ ಪಕ್ಷಗಳನ್ನು ನಿಂದಿಸಿದ್ದಾರೆ ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕರು ತೀವ್ರ ಕೋಲಾಹಲ ಉಂಟುಮಾಡಿದ್ದಾರೆ.
ಡಿ.2ರಂದು ಪ್ರಾರಂಭವಾದ ರಾಜ್ಯಸಭಾ ಕಲಾಪದಲ್ಲಿ ಸಾದ್ವಿ ನಿರಂಜನ್ ಜ್ಯೋತಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕರು, ಕೂಡಲೇ ಪ್ರಧಾನಿ ಮೋದಿ, ಸಾದ್ವಿ ನಿರಂಜನ್ ಜ್ಯೋತಿ ಅವರ ರಾಜೀನಾಮೆ ಪಡೆಯಬೇಕೆಂದು ಒತ್ತಾಯಿಸಿದ್ದಾರೆ. ಇದೇ ವೇಳೆ ಲೋಕಸಭೆಯಲ್ಲೂ ಗದ್ದಲ ಉಂಟಾಗಿದೆ.
ದೆಹಲಿಗೆ ರಾಮನ ಅನುಯಾಯಿಗಳ ಸರ್ಕಾರ ಬೇಕೋ ಅಥವಾ ವಲಸೆ ಬಂದು ದೇಶವನ್ನು ಲೂಟಿ ಮಾಡುವವರ ನೇತೃತ್ವದ ಸರ್ಕಾರ ಬೇಕೋ ಎಂಬುದನ್ನು ನೀವೇ ನಿರ್ಧರಿಸಿ ಎಂದು ಜನರಿಗೆ ಕರೆ ನೀಡುವ ಮೂಲಕ ದೆಹಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಸಾದ್ವಿ ನಿರಂಜನ್ ಜ್ಯೋತಿ ಅವರು ಪರೋಕ್ಷವಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿ ಕೂಡಲೇ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದರು. ಇತ್ತೀಚಿನ ವರದಿ ಪ್ರಕಾರ, ಲೋಕಸಭೆಯಲ್ಲಿ ಬೇಷರತ್ ಕ್ಷಮೆ ಯಾಚಿಸಿರುವ ಸಾದ್ವಿ ನಿರಂಜನ್ ಜ್ಯೋತಿ ಅವರು ತಮಗೆ ಯಾರಿಗೂ ನೋವುಂಟು ಮಾಡಬೇಕೆಂಬ ಉದ್ದೇಶ ಇರಲಿಲ್ಲ ಎಂದು ಹೇಳಿದ್ದಾರೆ.