ಬೆಂಗಳೂರು : ಜಲಸಂಪನ್ಮೂಲ ಇಲಾಖೆಯು ನೀರಿನ ದರ ಪರಿಷ್ಕರಣೆಗಾಗಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದು, ಎರಡು ತಿಂಗಳೊಳಗೆ ಕೃಷಿ, ಕೈಗಾರಿಕೆ ಹಾಗೂ ಕುಡಿಯುವ ನೀರಿನ ದರಗಳನ್ನು ಪರಿಷ್ಕರಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕರ್ನಾಟಕ ನೀರಾವರಿ ಕಾಯ್ದೆ 1957ರ ಪ್ರಕಾರ ನೀರಿನ ದರವನ್ನು ಯೋಜನೆಗಳಲ್ಲಿ ನೀಡಿರುವ ಸವಲತ್ತುಗಳು ಹಾಗೂ ಬೆಳೆಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಇದಕ್ಕೂ ಮುನ್ನ ನೀರಿನ ದರಗಳು 2002ರ ಅಕ್ಟೋಬರ್ನಲ್ಲಿ ಪರಿಷ್ಕರಣೆಯಾಗಿದೆ. ಆದ್ದರಿಂದ ನೀರಿನ ದರ ಪರಿಷ್ಕರಣೆಯ ಕುರಿತು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಸಮಿತಿಯು, ಕನಿಷ್ಠ ಯೋಜನೆಗಳ ನಿರ್ವಹಣಾ ವೆಚ್ಚಕ್ಕೆ ಸರಿದೂಗುವಂತೆ ನೀರಿನ ದರ ಪರಿಷ್ಕರಣೆ ಮಾಡುವ ಬಗ್ಗೆ, ಹನಿ ನೀರಾವರಿ ಅಳವಡಿಸಿದ ಬೆಳೆಗಳಿಗೆ ಹಾಲಿ ಇರುವ ನೀರಿನ ದರಗಳನ್ನು ಪರಿಷ್ಕರಿಸಲು, ಏತ ನೀರಾವರಿ, ಇಆರ್ಎಂ ಯೋಜನೆಗಳು ಹಾಗೂ ಸೂಕ್ಷ್ಮ ನೀರಾವರಿ ಅಳವಡಿಸಿದ ಬೆಳೆಗಳಿಗೆ ಪ್ರತ್ಯೇಕ ನೀರಿನ ದರ ನಿಗದಿ ಪಡಿಸುವ ಬಗ್ಗೆ ಹಾಗೂ ಕುಡಿಯುವ ನೀರಿಗಾಗಿ ಕೈಗಾರಿಕೆಗಳಿಗೆ, ಕಾಲುವೆ, ಕೆರೆ, ಅಣೆಕಟ್ಟು ಇತರ ಮೂಲಗಳಿಂದ ಪಡೆಯುವ ನೀರಿನ ದರಗಳನ್ನು ಪರಿಷ್ಕರಿಸುವ ಬಗ್ಗೆ ಅಧ್ಯಯನ ನಡೆಸಿ ಶಿಫಾರಸು ಮಾಡಲಿದೆ ಎಂದು ಸಚಿವರು ನುಡಿದರು. ಇದರೊಂದಿಗೆ ಈ ನಿರ್ವಹಣಾ ವೆಚ್ಚ ಸಂಗ್ರಹದಲ್ಲಿ ದಕ್ಷತೆಯನ್ನು ಹೆಚ್ಚಿಸಲೂ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ನಿಗದಿ ಪಡಿಸಿದ ಗುರಿಯ ಶೇ. 25ರಷ್ಟು ಹಣವನ್ನಷ್ಟೇ ಸಂಗ್ರಹಿಸಲಾಗುತ್ತಿದೆ. ಹಂತ ಹಂತವಾಗಿ ಈ ಲೋಪವನ್ನು ಸರಿಪಡಿಸಲಾಗುವುದು. ಸಮರ್ಪಕ ನೀರು ಪೂರೈಕೆಯಾಗುತ್ತಿರುವ ಪ್ರದೇಶದಲ್ಲಿ ಶುಲ್ಕಸಂಗ್ರಹವನ್ನು ಪರಿಣಾಮಕಾರಿಯಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.
ಕಾಡಾ ಮತ್ತು ವಾಲ್ಮಿ ಸುಧಾರಣೆಗೆ ಕ್ರಮ: ರಾಜ್ಯದಲ್ಲಿ ಆರು ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರಗಳಿದ್ದು (ಕಾಡಾ), ಈ ವ್ಯವಸ್ಥೆಯನ್ನು ಇನ್ನಷ್ಟು ಬಲ ಪಡಿಸುವ ಬಗ್ಗೆ ರಚಿಸಲಾದ ಅಧ್ಯಯನ ಸಮಿತಿಯು ರಾಜಸ್ಥಾನ, ಆಂಧ್ರಪ್ರದೇಶ, ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಭೇಟಿ ನೀಡಿ, ಅಲ್ಲಿನ ಕಾಡಾ ಹಾಗೂ ವಾಲ್ಮಿ ಸಂಸ್ಥೆಗಳ ಆಡಳಿತ ವ್ಯವಸ್ಥೆಯನ್ನು ಅಧ್ಯಯನ ಮಾಡಿ ಸೆಪ್ಟೆಂಬರ್ 19 ರಂದು ವರದಿ ಸಲ್ಲಿಸಿದೆ. ಈ ಸಮಿತಿಯು ನೀಡಿರುವ ಶಿಫಾರಸುಗಳ ಅನುಷ್ಠಾನದ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.