ನವದೆಹಲಿ : ಇರಾಕ್ನಲ್ಲಿ ಭಾರತೀಯರು ನಾಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಪ್ರತಿಕ್ರಿಯಸಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಭಾರತೀಯರು ಹತ್ಯೆಯಾಗಿರುವ ಬಗ್ಗೆ ನಿಖರ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ಲೋಕಸಭೆಯಲ್ಲಿ ವಿಪಕ್ಷಗಳು ಇರಾಕ್ನಲ್ಲಿ ನಾಪತ್ತೆಯಾಗಿರುವ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದವು. ಇದಕ್ಕೆ ಪ್ರತಿಕ್ರಯಿಸಿದ ಸುಷ್ಮಾ, ಭಾರತೀಯರು ಹತ್ಯೆಯಾಗಿರುವ ಬಗ್ಗೆ ನಿಖರ ಮಾಹಿತಿ ಬಂದಿಲ್ಲ. ಸದ್ಯಕ್ಕೆ ದಾಖಲೆಗಳಲ್ಲಿ ಮಾತ್ರ ಅವರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಅಗತ್ಯವಿರುವ ಎಲ್ಲಾ ರಾಷ್ಟ್ರಗಳನ್ನು ಸಂಪರ್ಕ ಮಾಡಿದ್ದು, ಭಾರತೀಯರ ನಾಪತ್ತೆ ಕುರಿತು 7 ವಿವಿಧ ಮೂಲಗಳಿಂದ ಮಾಹಿತಿ ಪಡೆದಿದ್ದೇವೆ. ಇದರಲ್ಲಿ 6 ಮೂಲಗಳ ಪ್ರಕಾರ ಭಾರತೀಯರು ಜೀವಂತವಾಗಿದ್ದಾರೆ ಎಂಬ ಮಾಹಿತಿ ಬಂದಿದೆ. ಭಾರತೀಯರು ಮೃತಪಟ್ಟಿರುವ ಬಗ್ಗೆ ಯಾವುದೇ ಖಚಿತ ಮಾಹಿತಿ ಬಂದಿಲ್ಲ. ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರದಿಂದ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದ ಅವರು, ಬದುಕಿರುವ ಬಗ್ಗೆಯೂ ನಮಗೆ ನೇರ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಎಲ್ಲ ಭಾರತೀಯರು ಬದುಕಿದ್ದಾರೆ ಎಂದು ತಿಳಿದು ಬಂದಿದೆ. ಭಾರತೀಯರ ನಾಪತ್ತೆ ಕುರಿತು ಕೇಂದ್ರ ಸರ್ಕಾರ ಪ್ರತಿ ದಿನ ವಿಚಾರಿಸುತ್ತಿದೆ. ಹಾಗಾಗಿ, ಸುಮ್ಮನೆ ವದಂತಿಗಳನ್ನು ಹಬ್ಬಿಸಬೇಡಿ ಎಂದು ಸುಷ್ಮಾ ಸ್ವರಾಜ್ ಪ್ರತಿಪಕ್ಷಗಳಿಗೆ ಮನವಿ ಮಾಡಿದ್ದಾರೆ.