ರಾಮನಗರ : ಗೋರೂರಿನಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಬಿಬಿಎಂಪಿ ಮುಂದಾಗಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಗ್ರಾಮಸ್ಥರ ಪ್ರತಿಭಟನೆ ಬುಗಿಲೆದ್ದಿದೆ.
ಕಸವಿಲೇವಾರಿ ಘಟಕ ಸ್ಥಾಪನೆಗಾಗಿ ರಾಮನಗರ ಜಿಲ್ಲೆ ಗೋರೂರು ಗ್ರಾಮದಲ್ಲಿ ಸರ್ವೆ ಕಾರ್ಯ ಆರಂಭವಾಗಿದ್ದು, ಗ್ರಾಮಸ್ಥರ ವಿರೋಧದ ನಡುವೆಯೂ ಸರ್ವೆ ಕಾರ್ಯ ಮುಕ್ತಾಯವಾಗಿದೆ.
ಸರ್ವೆ ಕಾರ್ಯಕ್ಕೆ ಅಡ್ಡಿ ಪಡಿಸಿರುವ ಗ್ರಾಮಸ್ಥರು, ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು. ವಿರೋಧದ ನಡುವೆಯೂ ಸರ್ವೆ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮದ ಜನತೆ, ಸರ್ಕಾರಿ ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿದರು. ವಾಹನಗಳ ಗಾಜು ಪುಡಿ ಪುಡಿಗೊಂಡಿದೆ.
ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಪ್ರತಿಭಟನಾ ನಿರತ ಗ್ರಾಮಸ್ಥರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಹಲವು ಪ್ರತಿಭಟನಾಕಾರರಿಗೆ ಗಂಭೀರಗಾಯಗಳಾಗಿದ್ದು, ಗ್ರಾಮಸ್ಥರು ರಸ್ತೆಗಳಲ್ಲಿ ಮಲಗಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ಕಸ ವಿಲೇವಾರಿಯಿಂದ ಮಂಡೂರಿನಲ್ಲಿ ಉಂಟಾದ ಸ್ಥಿತಿಯೇ ಗೋರೂರಿನಲ್ಲಿಯೂ ಉಂಟಾಗಲಿದ್ದು, ಈ ಭಾಗದಲ್ಲಿ ಕಸ ವಿಲೇವಾರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ಭಾಗದಲ್ಲಿ ಶಾಲೆಗಳು, ಹಲವಾರು ಮನೆಗಳಿದ್ದು, ಸಾರ್ವಜನಿಕರು ಓದಾಡು ಪ್ರದೇಶವಾಗಿದೆ. ಇಂತಹ ಸ್ಥಳಗಳಲ್ಲಿ ಕಸ ವಿಲೇವಾರಿ ಘಟಕ ಬೇಡ ಎಂಬುದು ಗ್ರಾಮಸ್ಥರ ಒತ್ತಾಯ. ಒಟ್ಟಿನಲ್ಲಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.