ಜಮ್ಮು-ಕಾಶ್ಮೀರ : 'ಜಮ್ಮು-ಕಾಶ್ಮೀರ'ದ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಉಗ್ರರು ಹಾಗೂ ಭಾರತೀಯ ಯೋಧರ ನಡುವೆ ಗುಂಡಿನ ದಾಳಿ ನಡೆದಿದೆ.
ಪ್ರತ್ಯೇಕವಾದಿ ಗೆರಿಲ್ಲಾಗಳು ಭಾರತದ ಗಡಿಯೊಳಕ್ಕೆ ಅತಿಕ್ರಮಣ ನಡೆಸಿದ ಹಿನ್ನೆಲೆಯಲ್ಲಿ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ಜಮ್ಮು-ಕಾಶ್ಮೀರ ಪೊಲೀಸ್ ಮೂಲಗಳ ಪ್ರಕಾರ, 3-4 ಜನರಿದ್ದ ಉಗ್ರರ ತಂಡ ಯೋಧರ ಮೇಲೆ ಪ್ರತಿದಾಳಿ ನಡೆಸಿದ್ದಾರೆ. ಆರ್.ಎಸ್ ಪುರ ಸೆಕ್ಟರ್ ನಲ್ಲಿರುವ ಗಡಿಯ ಮೂಲಕ ಉಗ್ರರು ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದರು ಎಂದು ತಿಳಿದುಬಂದಿದೆ.
ಇದೇ ವೇಳೆ ಸೇನೆಯಿಂದ ಬಳಕೆಯಲ್ಲಿ ಇಲ್ಲದೇ ಇರುವ ಬಂಕರ್ ನೊಳಗೆ ಉಗ್ರರು ಪ್ರವೇಶಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ. ಪಾಕಿಸ್ತಾನಿ ರೇಂಜರ್ ಗಳ ಸಹಾಯದ ಮೂಲಕ ಉಗ್ರರು ಗಡಿಯೊಳಗೆ ಪ್ರವೇಶಿಸಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಗುಂಡಿನ ಕಾಳಗದಲ್ಲಿ ಮೂವರು ಸೇನಾ ಸಿಬ್ಬಂದಿಗಳಿಗೆ ಗಾಯಗಳುಂಟಾಗಿದ್ದು ಇಬ್ಬರು ನಾಗರಿಕರೂ ಗಾಯಗೊಂಡಿದ್ದಾರೆ.
ಜಮ್ಮು-ಕಾಶ್ಮೀರದ ಗಡಿಯಲ್ಲಿ ನ.27ರ ಬೆಳಿಗ್ಗೆಯಿಂದಲೂ ಪಾಕ್ ರೇಂಜರ್ ಗಳು ಶೆಲ್ ದಾಳಿ ನಡೆಸುತ್ತಿದ್ದಾರೆ. ಉಗ್ರರು ಹಾಗೂ ಸೇನಾ ಸಿಬ್ಬಂದಿಗಳ ನಡುವಿನ ಗುಂಡಿನ ಕಾಳಗ ಮುಂದುವರೆದಿದೆ.