BW News Bureau : 'ತೆರಿಗೆ ಪಾವತಿ' ಮಾಡದೇ ಇರುವ ವಿವಿಧ ಖಾಸಗಿ ಕಂಪನಿಗಳಿಗೆ ಮೇಯರ್ ಶಾಂತಕುಮಾರಿ ಡೆಡ್ ಲೈನ್ ನೀಡಿದ್ದು 15 ದಿನಗಳಲ್ಲಿ ತೆರಿಗೆ ಪಾವತಿ ಮಾಡುವಂತೆ ಸೂಚಿಸಿದ್ದಾರೆ.
ತೆರಿಗೆ ಪಾವತಿ ಮಾಡದೇ ಇರುವ ಬಾಗ್ಮನೆ ಡೆವಲಪರ್ಸ್ ಗೆ ದಿಢೀರ್ ಭೇಟಿ ನೀಡಿದ ಮೇಯರ್ ಶಾಂತಕುಮಾರಿ, ತೆರಿಗೆ ಪಾವತಿಸಲು ಎಲ್ಲಾ ಖಾಸಗಿ ಕಂಪನಿಗಳಿಗೂ 15 ದಿನಗಳ ಕಾಲಾವಕಾಶ ನೀಡಿದ್ದಾರೆ. ಬಾಗ್ಮನೆ ಡೆವಲಪರ್ಸ್ ಕಂಪನಿ ಮಾತ್ರ ಮೇಯರ್ ಭೇಟಿ ಬೆನ್ನಲ್ಲೇ 11 ಕೋಟಿ 60 ಲಕ್ಷ ರೂಪಾಯಿಗಳನ್ನು ಪಾವತಿ ಮಾಡಿದೆ.
ಬಾಗ್ಮನೆ ಕಂಪನಿ, ಕಳೆದ ವರ್ಷವೇ ತೆರಿಗೆ ನೀಡಬೇಕಿತ್ತು. ಆದರೆ ಕೆಲ ಗೊಂದಲಗಳ ಹಿನ್ನೆಲೆಯಲ್ಲಿ ಕಂಪನಿ ಈ ವರ್ಷ ಪಾವತಿ ಮಾಡಿದೆ ಎಂದು ಶಾಂತಕುಮಾರಿ ತಿಳಿಸಿದ್ದಾರೆ.
ತೆರಿಗೆ ಪಾವತಿ ಮಾಡದೇ ಇರುವುದು ಹೀಗೆ ಮುಂದುವರೆದರೆ ಕಂಪನಿಗಳ ಮಾನ್ಯತೆ ರದ್ದುಮಾಡುವುದಾಗಿ ಮೇಯರ್ ಎಚ್ಚರಿಕೆ ನೀಡಿದ್ದಾರೆ. ತೆರಿಗೆ ಬಾಕಿ ಇಟ್ಟುಕೊಂಡವರಿಗೆ ನೊಟೀಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಅನಂತ್ ಮಾತನಾಡಿ, ಬಿಬಿಎಂಪಿಗೆ ಪ್ರತಿಯೊಂದು ಕಂಪನಿಗಳು ಖುದ್ದಾಗಿ ಬಾಕಿ ಹಣ ಕಟ್ಟಬೇಕು. 15 ದಿನಗಳ ಗಡುವು ನೀಡಲಾಗಿದೆ. ಅಲ್ಲದೇ ಇ ತೆರಿಗೆ ಪಾವತಿ ವಿಧಾನವೂ ಜಾರಿಗೆ ಬರಲಿದ್ದು ಅಷ್ಟರೊಳಗೆ ಹಣ ಕಟ್ಟದಿದ್ದರೆ ಕಠಿಣ ಕ್ರಮ ಅನಿವಾರ್ಯ ಎಂದು ಹೇಳಿದರು. ಕಂದಾಯ ಉಲಾಖೆ ಉಪ ಆಯುಕ್ತ ವೆಂಕಟಾಚಲಪತಿ ಮತ್ತು ಸ್ಥಾಯಿ ಸಮಿತಿ ಸದಸ್ಯರು ಹಾಜರಿದ್ದರು.