ಬೆಂಗಳೂರು : ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆರೋಗ್ಯ ಕವಚ-108 ಯೋಜನೆಯಡಿಯಲ್ಲಿ ಹೊಸದಾಗಿ 198 ಆಂಬ್ಯುಲೆನ್ಸ್ಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವ ಯು.ಟಿ.ಖಾದರ್, ಈಗಾಗಲೇ ಇರುವ 517 ಆಂಬ್ಯುಲೆನ್ಸ್ಗಳ ಜೊತೆ ನೂತನವಾಗಿ ಸೇರ್ಪಡೆಗೊಳ್ಳುತ್ತಿರುವ 198 ಆಂಬ್ಯುಲೆನ್ಸ್ಗಳ ಸೇರಿ ಒಟ್ಟು 715 ಆಂಬ್ಯುಲೆನ್ಸ್ಗಳು ಕರ್ನಾಟಕದಾದ್ಯಂತ ಜನರ ತುರ್ತು ಸೇವೆಗಾಗಿ ಮೀಸಲಾಗಿದೆ. ಕರ್ನಾಟಕ ಸರ್ಕಾರದ ಮಹಾತ್ವಾಂಕ್ಷೆಯ ಈ ಯೋಜನೆಗೆ ನ.25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದರು.
ಆರೋಗ್ಯ ಕವಚ 108 ಎಲ್ಲಾ ರೀತಿಯ ತುರ್ತು ಸಂದರ್ಭಗಳಲ್ಲಿ ಸಿಗುವಂತಹ ಸೇವೆ ಹೆರಿಗೆ ಅಥವಾ ಪ್ರಸೂತಿ ಸಂದರ್ಭದಲ್ಲಿ, ರಸ್ತೆ ಅಥವಾ ಇನ್ನಿತರ ಅಪಘಾತಗಳ ಸಂದರ್ಭಗಳಲ್ಲಿ, ಯಾವುದೇ ತುರ್ತು ಚಿಕಿತ್ಸೆ ಬೇಕಾದಂತಹ ವೈದ್ಯಕೀಯ ಪ್ರಕರಣಗಳಲ್ಲಿ ಈ ಸೇವೆಯನ್ನು ಬಳಸಬಹುದು. ಜೊತೆಗೆ ಪೊಲೀಸ್, ಅಗ್ನಿ ದುರಂತ ಮುಂತಾದ ಸಂದರ್ಭದಲ್ಲಿ ಕೂಡ ಈ ಸೇವೆಯನ್ನು ಬಳಸಬಹುದು.
ಯಾವುದೇ ಅಪಘಾತ ಅಥವಾ ಹೃದಯಾಘಾತದಂತಹ ಸಂದರ್ಭದಲ್ಲಿ ಮೊದಲ ಒಂದು ಗಂಟೆ ಅತ್ಯಂತ ಮಹತ್ವದ್ದಾಗಿದೆ. ಇಂತಹ ಸಮಯದಲ್ಲಿ ವೈದ್ಯಕೀಯ ಸೇವೆ ದೊರಕಿದರೆ ಪ್ರಾಣವನ್ನು ಉಳಿಸುವುದಕ್ಕೆ ಸಾಧ್ಯ. ಈ “ Golden Hour” ನಲ್ಲಿ ವ್ಯಕ್ತಿಯ ಪ್ರಾಣ ಉಳಿಸುವ ಉದ್ದೇಶದಿಂದ ಈ ಆರೋಗ್ಯ ಕವಚ ಯೋಜನೆ ಹಮ್ಮಿಕೊಳ್ಳಲಾಗಿದೆ.
108 ಎನ್ನುವ ಉಚಿತ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಆಂಬ್ಯುಲೆನ್ಸ್ ದೊರೆಯುತ್ತದೆ. ಈ ಕರೆಯನ್ನು ಸ್ಥಿರ ದೂರವಾಣಿ ಅಥವಾ ಮೊಬೈಲ್ನಿಂದ ಮಾಡಬಹುದಾಗಿದೆ. ಆದ್ದರಿಂದ ಈ ಸೇವೆ ದಿನದ 24 ಗಂಟೆ, ವಾರದ ಏಳು ದಿನ, ವರ್ಷದ 365 ದಿನವೂ ಲಭ್ಯ. ಕರ್ನಾಟಕದ 6 ಕೋಟಿಗೂ ಮೀರಿದ ಜನಸಂಖ್ಯೆಯಲ್ಲಿ ಯಾರು ಬೇಕಾದರೂ ಕರೆ ಮಾಡಿ ಈ ಸೌಲಭ್ಯ ಪಡೆಯಬಹುದು. ಈ ಸೇವೆಯನ್ನು ನಗರ, ಗ್ರಾಮೀಣ ಎನ್ನುವ ಭೇದವಿಲ್ಲದೆ, ಸಿರಿವಂತರು, ಬಡವರು ಎನ್ನುವ ತಾರತಮ್ಯವಿಲ್ಲದೇ ಎಲ್ಲ ವರ್ಗದ ಜನರಿಗೆ ಸಂಪೂರ್ಣ ಉಚಿತವಾಗಿ ಪ್ರಾಣ ಉಳಿಸುವ ಈ ಸೇವೆಯನ್ನು ನೀಡಲಾಗುತ್ತಿದೆ.
ಈ ಯೋಜನೆಯನ್ನು Public Private Partnership ಮೂಲಕ ಒದಗಿಸಲಾಗುತ್ತಿದೆ. ಇಂತಹ ಸೇವೆಯನ್ನು ನೀಡಿದ ಅಪಾರ ಅನುಭವ ಇರುವಂತಹ ಸಿಕಂದರಾಬಾದ್ EMRI ಎನ್ನು ಲಾಭರಹಿತ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. 2008 ನವೆಂಬರ್ 1 ರಂದು ಯೋಜನೆಯನ್ನು ಪ್ರಾರಂಭಿಸಲಾಯಿತು. ಪ್ರಸ್ತುತ ಕರ್ನಾಟಕದಲ್ಲಿ 517 ಆಂಬ್ಯುಲೆನ್ಸ್ಗಳು ಕೆಲಸ ಮಾಡುತ್ತಿವೆ. ಇದು ಸುಸಜ್ಜಿತವಾದಂತಹ ಆಂಬ್ಯುಲೆನ್ಸ್. ಈ ಆಂಬ್ಯುಲೆನ್ಸ್ಗಳಲ್ಲಿ ತುರ್ತು ವೈದ್ಯಕೀಯ ಯಂತ್ರೋಪಕರಣಗಳು ಇರುತ್ತವೆ. Oxygen, Ventilators ಮುಂತಾದ ಪ್ರಾಣ ಉಳಿಸುವ ಸೌಕರ್ಯಗಳಿವೆ. ಈ ವಾಹನವನ್ನು ವಿಶೇಷವಾಗಿ ತರಬೇತಿ ಹೊಂದಿದ ಬಾಲಕರು ಓಡಿಸುತ್ತಾರೆ. ಆಂಬ್ಯುಲೆನ್ಸ್ ಒಳಗಡೆ ಶುಶ್ರೂಷಕರು ಹಾಗೂ ನುರಿತ ಆರೆ ವೈದ್ಯಕೀಯ ತಂತ್ರಜ್ಞರು ಇರುತ್ತಾರೆ. ಚಾಲಕರಿಗೆ ಪೈಲಟ್ ಎಂದು ಕರೆಯಲಾಗುತ್ತದೆ. ಇವರೂ ಸೇರಿ ಒಟ್ಟು 5 ಜನರಿರುತ್ತಾರೆ. ಇವರೆಲ್ಲರಿಗೂ ತುರ್ತು ಸ್ಥಿತಿಗಳನ್ನು ನಿಭಾಯಿಸುವ ವಿಶೇಷ ಕೌಶಲ್ಯವಿರುತ್ತದೆ. ವಾಹನದಲ್ಲಿ ತುರ್ತು ಚಿಕಿತ್ಸೆ ನೀಡುತ್ತಾ ಹತ್ತಿರದ ಆಸ್ಪತ್ರೆಗೆ ಹೆಚ್ಚಿನ ಸೇವೆಗಾಗಿ ತುರ್ತಾಗಿ ರೋಗಿಯನ್ನು ಸಾಗಿಸಿ ಪ್ರಾಣ ಉಳಿಸುವ ಕೆಲಸದಲ್ಲಿ 715 ತಂಡಗಳು ಕಾರ್ಯೋನ್ಮುಖರಾಗಿರುತ್ತಾರೆ.
ರಾಜ್ಯದಲ್ಲಿ ಒಟ್ಟು 715 ಆಂಬ್ಯುಲೆನ್ಸ್ಗಳು ಸೇವೆಗೆ ಮೀಸಲಿದ್ದು, ಸುಮಾರು 75 ಸಾವಿರ ಜನಸಂಖ್ಯೆಗೆ ಒಂದರಂತೆ ಆಂಬ್ಯುಲೆನ್ಸ್ ಒದಗಿಸಲಾಗಿದೆ. ಇವರುಗಳನ್ನು ಭೌಗೋಳಿಕವಾಗಿ ನಿರ್ಧಿಷ್ಟ ಸ್ಥಳಗಳಲ್ಲಿ ಇರಿಸಲಾಗಿದೆ. ಬೆಂಗಳೂರಿನಲ್ಲಿ ಸುಸುಜ್ಜಿತವಾದ ಕಂಪ್ಯೂಟರೀಕೃತ ಕೇಂದ್ರ ಕಚೇರಿಯಿದ್ದು, ದಿನದ 24 ಗಂಟೆಯೂ ಆಂಬ್ಯುಲೆನ್ಸ ಹಾಗೂ ಕೇಂದ್ರ ಕಚೇರಿಗೂ ನಿರಂತರ ದೂರವಾಣಿ ಸಂಪರ್ಕಿವಿರುತ್ತದೆ. ಈ ಎಲ್ಲಾ ಕಾರಣದಿಂದ, ಸರಾಸರಿ 20 ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಸೇವೆ ಲಭ್ಯವಾಗುತ್ತದೆ.