ನವದೆಹಲಿ : 'ಲೋಕಸಭೆ'ಯಲ್ಲಿ ಪ್ರತಿಪಕ್ಷ ಸ್ಥಾನ ಪಡೆಯುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿರುವ ಕಾಂಗ್ರೆಸ್ ಬಗ್ಗೆ ಬಿಜೆಪಿ ಲೇವಡಿ ಮಾಡಿದ್ದು, ವಿರೋಧಪಕ್ಷ ತೀವ್ರ ದುರ್ಬಲವಾಗಿದ್ದು ವಿಪಕ್ಷ ನಾಯಕನಿಗೆ ಮಾನ್ಯತೆ ನೀಡಲು ಸರ್ಕಾರವೇ ತಿದ್ದುಪಡಿ ತರುವ ಸ್ಥಿತಿ ಎದುರಾಗಿದೆ ಎಂದು ಹೇಳಿದೆ.
ಬಿಜೆಪಿ ಸದಸ್ಯತ್ವ ಜಾಥ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಬಿಜೆಪಿ ವಿರೋಧ ಪಕ್ಷವಾಗಿದ್ದಾಗ ಜನರ ಧ್ವನಿಯಾಗಿತ್ತು. ಆದರೆ ಇಂದಿನ ವಿರೋಧ ಪಕ್ಷ ದುರ್ಬಲವಾಗಿದೆ ಎಂದು ಲೇವಡಿ ಮಾಡಿದ್ದಾರೆ. ಅಲ್ಲದೇ ಬಿಜೆಪಿ ಸರ್ಕಾರ ಎಷ್ಟು ಬಲಿಷ್ಟವಾಗಿದೆ ಎಂದರೆ ನಮಗೆ ನಿಜವಾದ ವಿರೋಧವೇ ಇಲ್ಲ ಎಂದಿದ್ದಾರೆ.
ಸದ್ಯ 3.6 ಕೋಟಿ ಸದ್ಯರನ್ನು ಹೊಂದಿರುವ ಬಿಜೆಪಿ ಪಕ್ಷ ಅದನ್ನು ಮೂರು ಪಟ್ಟು ಹೆಚ್ಚುಗೊಳಿಸುವ ಕಾರ್ಯತಂತ್ರ ರೂಪಿಸಿದೆ ಮತ್ತು ಪಕ್ಷದ ಕಾರ್ಯಕರ್ತರನ್ನು 6 ಲಕ್ಷದಿಂದ 8 ಲಕ್ಷಕ್ಕೆ ಏರಿಸುವುದರತ್ತ ಗಮನ ಹರಿಸಿದೆ.
ಲೋಕಸಭೆಯ 543 ಸದಸ್ಯ ಸಂಖ್ಯೆಯಲ್ಲಿ ಶೇಕಡ 10ರಷ್ಟು ಸದಸ್ಯರೂ ಕಾಂಗ್ರೆಸ್ ನಿಂದ ಆಯ್ಕೆಯಾಗಿಲ್ಲವಾದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಕೊಡಲಾಗುವುದಿಲ್ಲ ಎಂದು ಈ ಹಿಂದೆ ಸ್ಪೀಕರ್ ಹೇಳಿದ್ದರು. ಕಾಂಗ್ರೆಸ್ 44 ಲೋಕಸಭಾ ಸದಸ್ಯರ ಬಲಾಬಲ ಹೊಂದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾಂಗ್ರೆಸ್ ಬಗ್ಗೆ ಟೀಕೆ ಮಾಡಿದೆ.