ನವದೆಹಲಿ : 'ಫಿಕ್ಸಿಂಗ್ ಹಗರಣ'ದ ಕಳಂಕ ಹೊತ್ತಿರುವ ಬಿಸಿಸಿಐಗೆ ಸುಪ್ರೀಂ ಕೋರ್ಟ್ ಚಾಟಿ ಏಟು ನೀಡಿದ್ದು ನೀವು ಕ್ರಿಕೆಟನ್ನು ಕೊಲ್ಲುತ್ತಿದ್ದೀರಿ ಎಂದು ಛೀಮಾರಿ ಹಾಕಿದೆ.
ಐಪಿಎಲ್ ಸೀಸನ್-6ರಲ್ಲಿ ನಡೆದ ಬೆಟ್ಟಿಂಗ್ ಹಾಗೂ ಫಿಕ್ಸಿಂಗ್ ಹಗರಣದ ತನಿಖೆ ನಡೆಸಿದ್ದ ಮುದ್ಗಲ್ ಸಮಿತಿ ವರದಿಯಲ್ಲಿ ತಮ್ಮ ಹೆಸರು ಇಲ್ಲದೇ ಇರುವುದರಿಂದ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆಯಲು ಅನುಮತಿ ನೀಡಬೇಕೆಂದು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಬಿಸಿಸಿಐ ಹಾಗೂ ಶ್ರೀನಿವಾಸನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ನೀವು ಕ್ರಿಕೆಟ್ ಕ್ರೀಡೆಯನ್ನು ಕೊಲ್ಲುತ್ತಿದ್ದೀರಿ ಎಂದು ಕಿಡಿ ಕಾರಿದೆ.
ದೇಶದ ಜನತೆಗೆ ಕ್ರಿಕೆಟ್ ಬಗ್ಗೆ ಅತೀವ ಆಸಕ್ತಿ, ನಂಬಿಕೆ ಇದೆ. ಆದರೆ ಕ್ರೀಡೆಯನ್ನು ನೀವು ಕೊಲ್ಲುತ್ತಿದ್ದೀರಿ, ಬಿಸಿಸಿಐ ಮುಖ್ಯಸ್ಥರಾಗಿ ನೀವು ಫಿಕ್ಸಿಂಗ್, ಬೆಟ್ಟಿಂಗ್ ಹಗರಣ ನಡೆದಾಗ ಏಕೆ ಕ್ರಮ ಕೈಗೊಂಡಿಲ್ಲ ಎಂದು ಸುಪ್ರೀಂ ಕೋರ್ಟ್ ಶ್ರೀನಿವಾಸನ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಇದೇ ವೇಳೆ ಶ್ರೀನಿವಾಸನ್ ಅವರನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಸಿಸಿಐ ವಿರುದ್ಧವೂ ಸುಪ್ರೀಂ ಅಸಮಾಧಾನ ವ್ಯಕ್ತಪಡಿಸಿದೆ.
ಫಿಕ್ಸಿಂಗ್ ಹಗರಣಕ್ಕೆ ಸಬಂಧಿಸಿದಂತೆ ಕಳೆದ ವಾರ ಮುಕುಲ್ ಮುದ್ಗಲ್ ಸಮಿತಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ವರದಿಯಲ್ಲಿ ಶ್ರೀನಿವಾಸನ್ ಅವರ ವಿರುದ್ಧ ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ ಆರೋಪ ಸಾಬೀತಾಗದೇ ಇರುವ ಕಾರಣ ಮತ್ತೆ ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಅನುಮತಿ ನೀಡಬೇಕೆಂದು ಶ್ರೀನಿವಾಸನ್ ಸುಪ್ರೀಂ ಮೊರೆ ಹೋಗಿದ್ದರು.