ಚಂಡೀಗಢ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ವಿರುದ್ಧದ ಅಕ್ರಮ ಭೂ ವ್ಯವಹಾರ ಆರೋಪಗಳ ತನಿಖೆಯನ್ನು ಹರ್ಯಾಣ ಸರ್ಕಾರ ಇನ್ನಷ್ಟು ತೀವ್ರಗೊಳಿಸಿದೆ.
ರಾಬರ್ಟ್ ವಾದ್ರಾ ಹೊಂದಿರುವ ಎಲ್ಲ ಆಸ್ತಿ ಮತ್ತು ಅವರ ಒಡೆತನದ ಕಂಪನಿಗಳ ವಿವರಗಳನ್ನು ನೀಡುವಂತೆ ರಾಜ್ಯ ಸರ್ಕಾರ ಗುಡಗಾಂವ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.
ಭೂ ದಾಖಲೆ ನಿರ್ದೇಶಕರು ಗುಡಗಾಂವ್ ಜಿಲ್ಲಾಧಿಕಾರಿ ಮತ್ತು ಉಪ ಆಯುಕ್ತ ಶೇಖರ್ ವಿದ್ಯಾರ್ಥಿ ಅವರಿಗೆ ಪತ್ರವೊಂದನ್ನು ಬರೆದು ವಿವರಣೆ ನೀಡುವಂತೆ ಕೇಳಿದ್ದಾರೆ. ಒಂದು ವಾರದ ಒಳಗಾಗಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ಇದು ವಾದ್ರಾರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆ ಇದೆ.
ಹರ್ಯಾಣದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಸ್ವೀಕರಿಸಿದ ದಿನವೇ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಅವರು ವಾದ್ರಾ ವಿರುದ್ಧ ತನಿಖೆಗೆ ಆದೇಶಿಸಿದ್ದರು. ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಾದ್ರಾ ಕೊಟ್ಯಂತರ ರೂ. ಅಕ್ರಮ ಭೂ ವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.