ಇಸ್ಲಾಮಾಬಾದ್ : ವಿಶ್ವಸಂಸ್ಥೆಯಲ್ಲಿ ಮುಖಭಂಗ ಎದುರಿಸಿದ್ದರೂ, ಪಾಕಿಸ್ತಾನ ಕಾಶ್ಮೀರ ವಿಷಯದಲ್ಲಿ ಮತ್ತೆ ಕ್ಯಾತೆ ತೆಗೆದಿದೆ. ಅಮೆರಿಕಾ ಮೊರೆ ಹೋಗಿರುವ ಪಾಕ್ ಪ್ರಧಾನಿ ನವಾಜ್ ಷರೀಫ್, ಭಾರತದೊಂದಿಗೆ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುವಂತೆ ಬರಾಕ್ ಒಬಾಮ ಅವರಲ್ಲಿ ಮನವಿ ಮಾಡಿದ್ದಾರೆ.
ಬರಾಕ್ ಒಬಾಮ ಅವರ ಭಾರತ ಪ್ರವಾಸದಲ್ಲಿ ಕಾಶ್ಮಿರ ವಿಷಯವನ್ನು ಪ್ರಸ್ತಾಪಿಸಬೇಕು ಎಂದು ದೂರವಾಣಿ ಮೂಲಕ ನವಾಜ್ ಷರೀಫ್, ಒಬಾಮ ಅವರಲ್ಲಿ ಮನವಿ ಮಾಡಿದ್ದಾರೆ. ಈ ವಿಷಯವನ್ನು ಪಾಕಿಸ್ತಾನ ಪ್ರಧಾನಿ ಕಾರ್ಯಾಲಯ ಬಹಿರಂಗಗೊಳಿಸಿದೆ.ಇದೇ ವೇಳೆ ಪಾಕಿಸಾನಕ್ಕೆ ಭೇಟಿ ನೀಡುವಂತೆ ಬರಾಕ್ ಒಬಾಮ ಅವರಿಗೆ ನವಾಜ್ ಷರೀಫ್ ಆಮಂತ್ರಣ ನೀಡಿದ್ದಾರೆ.
ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಕೈಗೊಂಡಿರುವ ನಿರ್ಧಾರಗಳ ಬಗ್ಗೆ ಅಮೆರಿಕಾಗೆ ದೂರು ನೀಡಿರುವ ಪಾಕಿಸ್ತಾನ, ಭಾರತ ಕೆಲವೊಂದು ತಪ್ಪು ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದೆ. ವಿದೇಶಾಂಗ ಕಾರ್ಯದರ್ಶಿಗಳ ನಡುವಿನ ಮಾತುಕತೆ ಹಾಗೂ ಗಡಿ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸುವುದೂ ಸೇರಿದಂತೆ ಭಾರತ ಕೆಲವು ತಪ್ಪು ನಿರ್ಧಾರ ಕೈಗೊಂಡಿದೆ ಎಂಬುದು ಪಾಕ್ ನ ಆರೋಪ.
ಇದೇ ವೇಳೆ ಭಾರತದೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನ ಸಿದ್ಧವಿದೆ ಎಂದೂ ಅಮೆರಿಕಾ ಅಧ್ಯಕ್ಷರ ಬಳಿ ಷರೀಫ್ ತಿಳಿಸಿದ್ದಾರೆ.
ಕಾಶ್ಮೀರ ವಿಷಯದಲ್ಲಿ ಮಧ್ಯಪ್ರವೇಶಿಸುವುದಿಲ್ಲ, ಎಂದು ಅಮೆರಿಕಾ ಈ ಹಿಂದೆಯೇ ಸ್ಪಷ್ಟಪಡಿಸಿತ್ತು. ಆದಾಗ್ಯೂ ಮತ್ತೊಮ್ಮೆ ಪಾಕಿಸ್ತಾನ ಅಮೆರಿಕಾ ಮಧ್ಯಪ್ರವೇಶಿಸಿಸುವಂತೆ ಮನವಿ ಮಾಡಿದೆ.