ಕೊಲ್ಕತ್ತಾ : ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಹಗರಣದಲ್ಲಿ ಶಾಮೀಲಾಗಿರುವ ಆರೋಪ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್ನ ರಾಜ್ಯಸಭೆ ಸದಸ್ಯ ಶೃಂಜೋಯ್ ಬೋಸ್ ಅವರನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ಶೃಂಜೋಯ್ ಬೋಸ್ ರನ್ನು 5 ತಾಸುಗಳ ಸುದೀರ್ಘ ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ಸಿಬಿಐ ಪಶ್ಚಿಮಬಂಗಾಳದ ಜವಳಿ ಸಚಿವ ಶ್ಯಾಮಪದ ಮುಖರ್ಜಿ ಮತ್ತು ತೃಣಮೂಲ ಕಾಂಗ್ರೆಸ್ನ ಮಾಜಿ ಸಂಸದ ಸೊಮೇನ್ ಮಿತ್ರ ಅವರನ್ನು ಹಗರಣಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದೆ.
ಶಾರದಾ ಸ್ಥಿರಾಸ್ತಿ ಪ್ರಕರಣದಲ್ಲಿ ಶೃಂಜೋಯ್ ಬೋಸ್ ಅವರು ಶಾಮೀಲಾಗಿರುವ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದ್ದರೆ ಶಾರದಾ ಸಮೂಹದ ಮುಖ್ಯಸ್ಥ ಸುದಿಪೊ ಸೇನ್ಗೆ ಸಿಮೆಂಟ್ ಘಟಕದ ಶೇರುಗಳನ್ನು ಮಾರಾಟ ಮಾಡಿದ ಸಂಬಂಧ ಶ್ಯಾಮಪದ ಮುಖರ್ಜಿ ಮತ್ತು ಸೊಮೇನ್ ಮಿತ್ರ ಅವರನ್ನು ಪ್ರಶ್ನಿಸಲಾಯಿತು ಎಂದು ಸಿಬಿಐ ವಕ್ತಾರರು ತಿಳಿಸಿದರು.
ಬಂಧಿತ ಬೋಸ್ ಅವರನ್ನು ಶನಿವಾರ ಅಲಿಪೊರೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಬಂಗಾಳಿ ದೈನಿಕದ ಮಾಲಕರಾಗಿರುವ ಶೃಂಜೋಯ್ ಬೋಸ್ ಅವರನ್ನು ಸೇನ್ ಅವರೊಂದಿಗೆ ವ್ಯಾವಹಾರಿಕ ನಂಟು ಹೊಂದಿರುವ ಆರೋಪದ ಮೇಲೆ ಸಿಬಿಐ ಪ್ರಶ್ನಿಸಿತ್ತು. ಸುಮಾರು 5 ತಾಸುಗಳ ಸುದೀರ್ಘ ವಿಚಾರಣೆಯ ಬಳಿಕ ಸಿಬಿಐ ಬೋಸ್ ಅವರನ್ನು ಬಂಧಿಸಲಾಗಿದೆ. ಇದರೊಂದಿಗೆ ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಸಿಬಿಐನಿಂದ ಎಂಟು ಮಂದಿ ಬಂಧನಕ್ಕೊಳಗಾದಂತಾಗಿದೆ.
ಏತನ್ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐನಿಂದ ಸಮನ್ಸ್ ಪಡೆದಿದ್ದ ರಾಜ್ಯದ ಸಾರಿಗೆ ಸಚಿವ ಮದನ್ ಮಿತ್ರ ಅವರು ಅನಾರೋಗ್ಯದ ನಿಮಿತ್ತ ಸರಕಾರಿ ಸ್ವಾಮ್ಯದ ಎಸ್ಎಸ್ಕೆಎಂ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಮಧ್ಯೆ ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ನ ಇನ್ನೋರ್ವ ಸಂಸದರನ್ನು ಸಿಬಿಐ ಬಂಧಿಸಿರುವ ಹಿನ್ನೆಲೆಯಲ್ಲಿ ವಿಪಕ್ಷ ಬಿಜೆಪಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ನ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದೆ.