ಕೊಲಂಬೋ : ಅಂತಾರಾಷ್ಟ್ರೀಯ ಗಡಿ ನಿಯಮ ಉಲ್ಲಂಘಿಸಿದ್ದರ ಪರಿಣಾಮ ಗಲ್ಲುಶಿಕ್ಷೆಗೆ ಗುರಿಯಾಗಿದ್ದ 5 ಮೀನುಗಾರರನ್ನು ಶ್ರೀಲಂಕಾ ಸರ್ಕಾರ ಬಿಡುಗಡೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುವ ಸಂಬಂಧ ಶ್ರೀಲಂಕಾ ಸರ್ಕಾರದೊಂದಿಗೆ ಮಾತುಕತೆ ನಡೆಸಿತ್ತು. ಗಲ್ಲು ಶಿಕ್ಷೆಗೆ ಗುರಿಯಾಗಿರುವ ಮೀನುಗಾರರನ್ನು ಬಿಡುಗಡೆ ಮಾಡುವುದಾಗಿ ಶ್ರೀಲಂಕಾ ಸರ್ಕಾರ ಭರವಸೆ ನೀಡಿತ್ತು.
ಇದೀಗ ತಮಿಳುನಾಡಿನ ಐವರು ಮೀನುಗಾರರಾದ ಎಮರ್ಸ್ನ್, ಪಿ. ಆಗಸ್ಟಸ್, ಆರ್. ವಿಲ್ಸನ್, ಕೆ. ಪ್ರಶಾಂತ್ ಮತ್ತು ಜೆ. ಲಾಂಗ್ಲೆಟ್ ಇಂದು ಕೊಲಂಬೊ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಇನ್ನು ಎರಡು ದಿನಗಳಲ್ಲಿ ಚೆನ್ನೈ ತಲುಪಲಿದ್ದಾರೆ.
ಭಾರತೀಯ ಮೀನುಗಾರರಿಗೆ ಕೊಲಂಬೋ ಹೈಕೋರ್ಟ್ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಶ್ರೀಲಂಕಾ ಸರ್ಕಾರ ರದ್ದುಗೊಳಿಸಿದ್ದು, ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು ಮೀನುಗಾರರ ಬಿಡುಗಡೆಗೆ ಸಮ್ಮತಿಸಿದ್ದರು. ಯಾವುದೇ ಷರತ್ತುಗಳಿಲ್ಲದೆ ಐವರು ಮೀನುಗಾರರನ್ನು ಬಿಡುಗಡೆ ಮಾಡಲಾಗಿದೆ.
2011ರಲ್ಲಿ ರಾಮೇಶ್ವರದ ಸಮುದ್ರದಲ್ಲಿ ಮೀನು ಹಿಡಿಯಲು ಹೋಗಿದ್ದ 5 ಮೀನುಗಾರರು ಲಂಕಾ ನೌಕಾ ಪಡೆಗೆ ಸಿಕ್ಕಿಬಿದ್ದಿದ್ದರು. ಅಕ್ರಮವಾಗಿ ಮಾದಕ ದ್ರವ್ಯ ಸಾಗಣೆ ಮತ್ತು ಸಮುದ್ರ ಗಡಿ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಕೊಲಂಬೋ ಹೈಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು.