ಹಿಸ್ಸಾರ್ : ಸ್ವಘೋಷಿತ ದೇವಮಾನವ ವಿವಾದಾತ್ಮಕ ಸಂತ ರಾಮ್ ಪಾಲ್ ಕೂಡಲೇ ಶರಣಾಗತನಾಗಬೇಕು ಎಂದು ಹರ್ಯಾಣ ಹೈಕೋರ್ಟ್ ಮತ್ತು ಪೊಲೀಸರು ನೀಡಿರುವ ಗಡವು ಮುಗಿದಿದ್ದು, ಹರ್ಯಾಣ ಪೊಲೀಸರು ಹೊಸ ಕಾರ್ಯಾಚರಣೆಗೆ ಸಿದ್ಧರಾಗಿದ್ದಾರೆ.
ದೇವಮಾನವನ್ನು ಬಂಧಿಸಲು ನಡೆದ ವಿಫಲ ಕಾರ್ಯಾಚರಣೆಯಲ್ಲಿ ಹರ್ಯಾಣ ಪೊಲೀಸರು ರಾಂಪಾಲ್ ನ ಭಕ್ತರ ಜೊತೆ ಘರ್ಷಣೆಗಿಳಿದಿದ್ದರು. ಈ ಸಮಯದಲ್ಲಿ ವರದಿಗಾರರೂ ಸೇರಿದಂತೆ ಸುಮಾರು 2೦೦ ಜನರು ಗಾಯಗೊಂಡಿದ್ದಾರೆ.
ಈಗ ಬರ್ವಾಲ ಪೋಲೀಸ್ ಠಾಣೆಯಲ್ಲಿ ರಾಮ್ ಪಾಲ್ ಮತ್ತು ಆತನ ಭಕ್ತರ ವಿರುದ್ಧ ಹೊಸ ಮೊಕದ್ದಮೆ ದಾಖಲಿಸಲಾಗಿದ್ದು, ಪೊಲೀಸರು ನವೀನ ಕಾರ್ಯಾಚರಣೆಗೆ ಸನ್ನದ್ಧರಾಗಿದ್ದಾರೆ.
ಆಶ್ರಮದ ಭಕ್ತರಿಗೆ ಆಶ್ರಮ ತೊರೆಯಲು ಬೆಳಗ್ಗೆ 10 ಘಂಟೆಯ ಸಮಯದ ಗಡುವು ನೀಡಿದ್ದ ಪೊಲೀಸರಿಗೆ ರಾಮ್ ಪಾಲ್ ಆಶ್ರಮದಲ್ಲೇ ತಂಗಿದ್ದಾನೊ ಇಲ್ಲವೋ ಎಂಬುದರ ಬಗ್ಗೆ ಸುಳಿವಿಲ್ಲ.
ರಾತ್ರಿ ಸುಮಾರು 10,000 ರಾಮ್ ಪಾಲ್ ಬೆಂಬಲಿಗರನ್ನು ಸತ್ಲೋಕ್ ಆಶ್ರಮದಿಂದ ತೆರವು ಮಾಡಿ, ಸರ್ಕಾರಿ ಬಸ್ಸುಗಳಲ್ಲಿ ಸುರಕ್ಷಿತವಾಗಿ ಹಿಸಾರ್ ಗೆ ಕಳುಹಿಸಿದ್ದೇವೆ. ಆಶ್ರಮದಲ್ಲಿ ಇನ್ನೂ ಐದುಸಾವಿರ ಭಕ್ತರಿದ್ದು, ಶೀಘ್ರದಲ್ಲಿಯೇ ಎಲ್ಲರನ್ನೂ ಆಶ್ರಮದಿಂದ ರಕ್ಷಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ರಾಮ್ ಪಾಲ್ ಆಶ್ರಮದಲ್ಲಿ ನಾಲ್ವರ ಶವ ಪತ್ತೆಯಾಗಿದೆ. ಸಾವಿಗೆ ಕಾರಣವೆನೆಂಬುದು ಇನ್ನೂ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ಬಳಿಕೆ ಹೆಚ್ಚಿನ ಮಾಹಿತಿ ಸಿಗಲಿದೆ. ರಾಮ್ ಪಾಲ್ ಗೆ ಶರಣಾಗುವಂತೆ ಸೂಚಿಸಿದ್ದೆವೆ ಎಂದು ಹರ್ಯಾನ ಡಿಸಿಪಿ ಎಂ.ಎನ್.ವಸಿಷ್ಠ ತಿಳಿಸಿದ್ದಾರೆ.
12 ಎಕರೆ ಜಾಗದಲ್ಲಿರುವ ಆಶ್ರಮವನ್ನು 2೦,೦೦೦ ಕೆಂದ್ರ ಮೀಸಲು ಪಡೆ ಮತ್ತು ಹರ್ಯಾಣ ಪೋಲೀಸರ ಶೀಘ್ರ ಕಾರ್ಯಾಚರಣೆ ಪಡೆಯ ಭದ್ರತಾ ಸಿಬ್ಬಂದಿ ಸುತ್ತುವರೆದಿದ್ದು ಯಾವ ಕ್ಷಣದಲ್ಲಾದರೂ ರಾಮ್ ಪಾಲ್ ಮೇಲೆ ಕಾರ್ಯಾಚರಣೆ ಶುರುವಾಗಬಹುದಾಗಿದೆ. ಆಶ್ರಮಕ್ಕಿದ್ದ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಪೊಲೀಸರು ಕಡಿತಗೊಳಿಸಿದ್ದಾರೆ.