Belthangadi : ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ತಿಕ ಮಾಸದ ಲಕ್ಷದೀಪೋತ್ಸವ ನ.18ರಿಂದ ಪ್ರಾರಂಭವಾಗಿದೆ. ಶ್ರೀ ಮಂಜುನಾಥ ಸ್ವಾಮಿಗೆ ಹೊಸಕಟ್ಟೆ ಉತ್ಸವ ನಡೆಯಿತು.
ಶ್ರೀ ಮಂಜುನಾಥೇಶ್ವರ ಪ್ರೌಢಶಾಲಾ ಮೈದಾನದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನವನ್ನು ಜಿಲ್ಲಾಧಿ ಕಾರಿ ಎ.ಬಿ.ಇಬ್ರಾಹಿಂ ಉದ್ಘಾಟಿಸುವರು. ಡಾ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು.
ಸಂಜೆ ಧರ್ಮಸ್ಥಳದ ಸರಸ್ವತಿ ಸಂಗೀತ ಕಲಾ ಶಾಲೆಯವರಿಂದ ಭಕ್ತಿಗೀತೆ, ಭದ್ರಾವತಿಯ ಪಿ. ಶೇಖರ್ ಬಳಗದಿಂದ ಆರ್ಕೆಸ್ಟ್ರಾ. ಜಪಾನ್ನ ಸುಮಿಯೋ ಮೊರಿಜಿರಿ ತಂಡದಿಂದ ಜಪಾನಿನ ಕಲಾಪ್ರಕಾರ ಹಯಾಚಿನಿಟಕೆ ಕಗುರ ಪ್ರದರ್ಶನ ನಡೆಯಿತು.
ಲಕ್ಷದೀಪೋತ್ಸವ ಅಂಗವಾಗಿ ಆರಂಭವಾದ 37ನೇ ರಾಜ್ಯಮಟ್ಟದ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ವಸ್ತು ಪ್ರದರ್ಶನ ಎಂದರೆ ಅದು ಜ್ಞಾನ ಹಂಚುವ ಹಾಗೂ ಜ್ಞಾನ ಪಡೆಯುವ ಜ್ಞಾನದ ವಿನಿಮಯ ಕಾರ್ಯಕ್ರಮವಾಗಿದೆ ಎಂದರು.
ವಿಜ್ಞಾನ ತಂತ್ರಜ್ಞಾನ ನೂರಾರು ಪಟ್ಟು ಬೆಳೆದಿದೆ. ಇದನ್ನು ಎಲ್ಲರಿಗೂ ಆರ್ಜಿಸಲಾಗದು. ಅಂತಹ ಸಂದರ್ಭಗಳಲ್ಲಿ ಇಂತಹ ಪ್ರದರ್ಶನಗಳ ಮೂಲಕ ಹೊಸ ಜ್ಞಾನದ ಕನಿಷ್ಠ ತಿಳಿವಳಿಕೆ ಪಡೆಯಬಹುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಶ್ರೀ ಕ್ಷೇತ್ರದಲ್ಲಿ ದಾನ ಪರಂಪರೆಗೆ ಒಂದು ವ್ಯಕ್ತಿತ್ವ ತಂದುಕೊಡಲಾಗಿದೆ. ಅಪಾತ್ರರಿಗೆ ದಾನ ಮಾಡಬಾರದು ಎನ್ನುವುದು ಸಂಪ್ರದಾಯ. ಸರಕಾರಿ ಕಾರ್ಯಕ್ರಮ, ಸರಕಾರಿ ಯೋಜನೆಗಳನ್ನು ಜನ ಬಳಸಿಕೊಳ್ಳಬೇಕು. ಇಂತಹ ಪ್ರದರ್ಶನಗಳಿಂದ ಸರಕಾರಿ ಕಾರ್ಯಕ್ರಮಗಳ ಕುರಿತು ಕೂಡ ಜನರಿಗೆ ಮಾಹಿತಿ ದೊರೆಯುತ್ತದೆ ಎಂದರು.