ಕೋಲ್ಕತ್ತಾ : ಕೋಮು ಸೌಹಾರ್ದ ವಿಧ್ವಂಸ ನೀತಿಯನ್ನು ಅನುಸರಿಸುತ್ತಿರುವ ಬಿಜೆಪಿಯನ್ನು ಮಣಿಸಲು ಎಡಪಂಥೀಯರೊಡನೆ ಕೈಜೋಡಿಸಲು ಸಿದ್ಧವಿರುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.
ಹೆಡ್ ಲೈನ್ಸ್ ಟುಡೆ ವಾಹಿನಿಯ ರಾಜ್ ದೀಪ್ ಸರ್ದೇಸಾಯಿ ನಡೆಸಿರುವ ಸಂದರ್ಶನದಲ್ಲಿ ಮಾತನಾಡಿರುವ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಮ್ಯುನಿಷ್ಟರೊಂದಿಗೆ ಮೈತ್ರಿ ಮಾಡುಕೊಳ್ಳುವುದಾಗಿ ತಿಳಿಸಿದ್ದಾರೆ.
ಸಿ.ಪಿ.ಎಂ(ಐ) ನ ಭದ್ರ ಕೋಟೆಯಾಗಿದ್ದ ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಷ್ಟರ ವಿರುದ್ಧ ಹೋರಾಟ ನಡೆಸಿದ್ದ ಮಮತಾ ಬ್ಯಾನರ್ಜಿ, 2011ರಲ್ಲಿ ಐತಿಹಾಸಿಕ ಗೆಲುವು ದಾಖಲಿಸಿ ಕಮ್ಯುನಿಷ್ಟ್ ಪಕ್ಷದ ದಶಕಗಳ ನಿರಂತರ ಆಡಳಿತಕ್ಕೆ ಅಂತ್ಯ ಹಾಡಿದ್ದರು. ಅಂದಿನಿಂದ ಎಡಪಂಥೀಯರ ವಿರುದ್ಧ ಕಿಡಿ ಕಾರುವ ಮಮತಾ ಬ್ಯಾನರ್ಜಿ ಇದೀಗ ಬಿಜೆಪಿಯ ವಿರುದ್ಧ ಹೋರಾಟ ನಡೆಸಲು ತಮ್ಮ ಶತೃವಿನೊಂದಿಗೆ ಕೈಜೋಡಿಸಲು ಮುಂದಾಗಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು, 2014ರ ಲೋಕಸಭಾ ಚುನಾವಣೆಯಿಂದ ಕಂಗೆಟ್ಟಿರುವ ಮಮತಾ ಬ್ಯಾನರ್ಜಿ ತಮ್ಮ ರಾಜಕೀಯ ಉಳಿವಿಗಾಗಿ ಈ ತಂತ್ರ ರೂಪಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಯಾರಿಂದಿಗೆ ಮೈತ್ರಿ ಮಾಡಿಕೊಂಡರೂ, ಪ್ರಧಾನಿ ಮೋದಿ ಅವರ ಕಾಂಗ್ರೆಸ್ ಮುಕ್ತ ಭಾರತದ ಸಂಕಲ್ಪದಂತೆಯೇ ಪಶ್ಚಿಮ ಬಂಗಾಳವನ್ನು ತೃಣಮೂಲ ಕಾಂಗ್ರೆಸ್ ಮುಕ್ತ ಮಾಡುವ ಸಂಕಲ್ಪವೂ ಇಡೇರಲಿದೆ ಎಂದು ಬಿಜೆಪಿ ತಿಳಿಸಿದೆ.