ನವದೆಹಲಿ : ಜೀವ ಬೆದರಿಕೆ ಹಿನ್ನೆಲೆಯಲ್ಲಿ ಯೋಗ ಗುರು ಬಾಬಾ ರಾಮ್ ದೇವ್ಗೆ ಝಡ್ ಶ್ರೇಣಿಯ ಭದ್ರತೆಯನ್ನು ಕೇಂದ್ರ ಸರ್ಕಾರ ಒದಗಿಸಿದೆ.
ಬಾಬಾ ರಾಮ್ ದೇವ್ಗೆ ಜೀವ ಬೆದರಿಕೆಯಿದೆ ಎಂಬ ಭದ್ರತಾ ಸಂಸ್ಥೆಗಳ ಮಾಹಿತಿಯನ್ವಯ ಕೇಂದ್ರ ಗೃಹ ಸಚಿವಾಲಯ ಸೂಕ್ತ ಭದ್ರತೆ ಒದಗಿಸುವ ಹಿನ್ನೆಲೆಯಲ್ಲಿ ದೇಶದ ಗಣ್ಯರಿಗೆ ನೀಡುವ ಝಡ್ ಶ್ರೇಣಿಯ ಭದ್ರತೆಯನ್ನು ರಾಮ್ ದೇವ್ಗೆ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಾಮ್ದೇವ್ರನ್ನು ಸದ್ಯ 40 ಮಂದಿ ಕಮಾಂಡೋಗಳು ರಕ್ಷಣೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ರಾಮ್ ದೇವ್ಗೆ ನೀಡಿರುವ ಝಡ್ ಶ್ರೇಣಿ ಭದ್ರತೆ ಉತ್ತರಾಖಂಡ್ ರಾಜ್ಯದ ವ್ಯಾಪ್ತಿಗೆ ಮಾತ್ರ ಸೀಮಿತವಾಗಿದೆ.
ವಿದೇಶಗಳಲ್ಲಿ ಇಟ್ಟಿರುವ ಕಪ್ಪುಹಣವನ್ನು ಭಾರತಕ್ಕೆ ತರುವಂತೆ ಬಾಬಾ ರಾಮ್ ದೇವ್ ಅವರು ಹಲವು ವರ್ಷಗಳಿಂದ ಆಗ್ರಹಿಸುತ್ತಾ ಬಂದಿದ್ದಾರೆ. ಅಲ್ಲದೆ ಅಕ್ರಮವಾಗಿ ಕಪ್ಪುಹಣವನ್ನು ಕೂಡಿಟ್ಟಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು.