ಚೆನ್ನೈ : ನನಗೆ ರಾಜಕೀಯ ಎಂದರೆ ಭಯವಿಲ್ಲ. ಆದರೆ ಅದರೊಳಗೆ ಧುಮುಕಲು ಸಂಕೋಚವಾಗುತ್ತದೆ ಎಂದು ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಹೇಳಿದ್ದಾರೆ.
ಚೆನ್ನೈನಲ್ಲಿ ತಮ್ಮ ಹೊಸ ತ್ರಿಭಾಷಾ ಚಿತ್ರ 'ಲಿಂಗಾ' ಧ್ವನಿಸುರುಳಿ ಹಾಗೂ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ರಜನಿಕಾಂತ್, ರಾಜಕೀಯ ಎಂಬುದು ತುಂಬಾ ಆಳ ಹಾಗೂ ಅಪಾಯಕಾರಿ. ರಾಜಕೀಯದಲ್ಲಿ ಬಲಿಷ್ಠ ಬೇರುಗಳಿರಬೇಕಾದ್ದು ಮುಖ್ಯ ಎಂದರು.
ರಾಜಕೀಯ ಎಂದರೆ ನನಗೆ ಭಯವೇನೂ ಇಲ್ಲ. ಆದರೆ ಅದರಲ್ಲಿ ಧುಮುಕಲು ಸಂಕೋಚವಾಗುತ್ತದೆ. ದೇವರು ತೋರಿಸಿದ ದಾರಿಯಲ್ಲಿ ನಾನು ಸಾಗುತ್ತಿದ್ದೇನೆ. ದೇವರು ಬಯಸಿದರೆ ಮಾತ್ರ ರಾಜಕೀಯಕ್ಕೆ ಬಂದು ಜನರ ಸೇವೆ ಮಾಡುತ್ತೇನೆ ಎಂದು ಅಭಿಪ್ರಾಯಪಟ್ಟರು.
ಈ ಹೇಳಿಕೆ ರಜನೀಕಾಂತ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಊಹಾಪೋಹಗಳಿಗೆ ಇನ್ನಷ್ಟು ಪುಷ್ಠಿನೀಡಿದಂತಾಗಿದೆ.