ನವದೆಹಲಿ : ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಲು ಅಣ್ಣಾ ಹಜಾರೆ 2012ರಲ್ಲೇ ಒಪ್ಪಿಗೆ ಸೂಚಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಅಣ್ಣಾ ಅವರಿಂದ ಅರವಿಂದ ಕೇಜ್ರಿವಾಲ್ ಅವರು ದೂರವಾಗಿ, ಹೊಸ ಪಕ್ಷ ಕಟ್ಟಿದರು ಎಂದು ಕಾಂಗ್ರೆಸ್ಸಿಗ ಸಲ್ಮಾನ್ ಖುರ್ಷಿದ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಅದರ್ ಸೈಡ್ ಆಫ್ ದ ಮೌಂಟೇನ್ ಎಂಬ ಪುಸ್ತಕವನ್ನು ಸಲ್ಮಾನ್ ಖುರ್ಷಿದ್ ಅವರು ಬರೆದಿದ್ದು, ಅದರಲ್ಲಿ ಈ ಕುರಿತ ಮಾಹಿತಿ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 2012ರಲ್ಲಿ ಈ ಕುರಿತ ವರದಿಗಳು ಬಂದಿದ್ದವಾದರೂ ಅದನ್ನು ಖುರ್ಷಿದ್ ಹಾಗೂ ಅಣ್ಣಾ ಹಜಾರೆ ಇಬ್ಬರೂ ನಿರಾಕರಿಸಿದ್ದರು.
ಅಣ್ಣಾ ಹಜಾರೆ ಅವರು ಕಾಂಗ್ರೆಸ್ ಪರ ಪ್ರಚಾರ ಮಾಡಲು ಒಪ್ಪಿಗೆ ಸೂಚಿಸಿದ್ದು, ಅದಕ್ಕೂ ಮುನ್ನ ಅವರನ್ನು ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಭೇಟಿ ಮಾಡಿದ್ದು ಸೇರಿದಂತೆ ಹಲವು ಮಾಹಿತಿಗಳನ್ನು ಪುಸ್ತಕದಲ್ಲಿ ಸಲ್ಮಾನ್ ಖುರ್ಷಿದ್ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
2012ರ ಜೂ.23ರಂದು ಪತ್ನಿ ಲೂಯಿಸ್ ಜತೆ ಪುಣೆಯಲ್ಲಿದ್ದೆ. ಮಧ್ಯವರ್ತಿಯೊಬ್ಬರು ಬಂದು ಅಣ್ಣಾ ಹಜಾರೆ ಭೇಟಿ ಮಾಡಿಸುವುದಾಗಿ ಹೇಳಿದರು. ಈ ವಿಷಯವನ್ನು ಪಕ್ಷದ ಹೈಕಮಾಂಡ್ಗೆ ತಿಳಿಸಿದೆ. ಭೇಟಿಗೆ ಒಪ್ಪಿಗೆ ದೊರೆಯಿತು. ಅಲ್ಲದೆ ಅಣ್ಣಾ ಹಜಾರೆ ಅವರು ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಾರೆಯೇ ಕೇಳಿ ನೋಡಿ ಎಂಬ ಸೂಚನೆ ಬಂತು.
ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸುವ ನೆವದಲ್ಲಿ ಮಹಾರಾಷ್ಟ್ರ ಪೊಲೀಸರ ಕಣ್ತಪ್ಪಿಸಿ ಪುಣೆಯ ರಹಸ್ಯ ಸ್ಥಳವೊಂದರಲ್ಲಿ ಅಣ್ಣಾ ಹಜಾರೆ ಅವರನ್ನು ಭೇಟಿ ಮಾಡಿದೆ. ಸಭೆ ಅತ್ಯಂದ ಫಲಪ್ರದವಾಯಿತು. ಕಾಂಗ್ರೆಸ್ ಪರ ಪ್ರಚಾರ ಮಾಡಲು ಅಣ್ಣಾ ಹಜಾರೆ ಒಪ್ಪಿದರು. ಅಲ್ಲದೆ ಸರ್ಕಾರದಿಂದ ಈ ಕುರಿತು ಅಧಿಕೃತ ಪತ್ರವೊಂದನ್ನು ನೀಡುವಂತೆ ಕೇಳಿಕೊಂಡರು.
ಆದರೆ ಯುಪಿಎ ಸರ್ಕಾರಕ್ಕೆ ಪ್ರಧಾನ ಮಂತ್ರಿಗಳ ಕಾರ್ಯಾಲಯದ ಕಡೆಯಿಂದ ಒಂದು ಎಡವಟ್ಟಾಯಿತು. ಅಣ್ಣಾ ಅವರಿಗೆ ಕಳುಹಿಸಬೇಕಾದ ಪತ್ರವನ್ನು ಅವರ ಹುಟ್ಟೂರಾದ ಮಹಾರಾಷ್ಟ್ರ ರಾಳೇಗಣ ಸಿದ್ಧಿಗೆ ರವಾನಿಸುವ ಬದಲು, ದೆಹಲಿಯಲ್ಲಿನ ಇಂಡಿಯಾ ಅಗೇನ್ಸರ್ ಕರಪ್ಷನ್ ಕಚೇರಿಗೆ ತಲುಪಿಸಿತು. ಆ ಸಂಘಟನೆಗೆ ಅರವಿಂದ ಕೇಜ್ರಿವಾಲ್ ಅವರೇ ಮುಖ್ಯಸ್ಥರಾಗಿದ್ದರು. ಪತ್ರ ನೋಡಿ ಕೇಜ್ರಿವಾಲ್ ದಿಗ್ಭ್ರಮೆಗೊಳಗಾದರು. ಅಣ್ಣಾ ಹಾಗೂ ಕಾಂಗ್ರೆಸ್ ನಡುವೆ ನಡೆಯುತ್ತಿದ್ದ ಮಾತುಕತೆ ಬಗ್ಗೆ ಅವರಿಗೆ ಗೊತ್ತೇ ಇರಲಿಲ್ಲ. ಬಳಿಕ ಅರವಿಂದ ಕೇಜ್ರಿವಾಲ್ ಅವರು ಅಣ್ಣಾ ಹಜಾರೆ ಅವರಿಂದ ದೂರ ಉಳಿದರು.
ಅಣ್ಣಾ ಅವರು ತಮ್ಮ ನಿಕಟವರ್ತಿ ಕಿರಣ್ ಬೇಡಿ ಅವರಿಗೂ ನನ್ನೊಂದಿಗಿನ ಭೇಟಿಯ ವಿಷಯ ತಿಳಿಸಿರಲಿಲ್ಲ. ಯಾವುದೋ ಸಂತರೊಬ್ಬರನ್ನು ಭೇಟಿ ಮಾಡಲು ಹೋಗುತ್ತಿರುವುದಾಗಿ ಅವರಿಗೆ ಸುಳ್ಳು ಹೇಳಿಬಂದಿದ್ದರು. ಒಂದು ವೇಳೆ ಮಾಧ್ಯಮಗಳಲ್ಲಿ ಭೇಟಿ ಕುರಿತು ವರದಿ ಬಂದರೆ ಅದನ್ನು ನಿರಾಕರಿಸುವಂತೆಯೂ ನನಗೆ ಸಲಹೆ ನೀಡಿದ್ದರು ಎಂದು ಪುಸ್ತಕದಲ್ಲಿ ಹೇಳಲಾಗಿದೆ ಎಂದು ತಿಳಿದುಬಂದಿದೆ.