ಬೆಂಗಳೂರು : ನೈಸ್ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ದೇವೆಗೌಡರು ತಮ್ಮ ವಿರುದ್ದ ಮಾಡಿರುವ ಆರೋಪಕ್ಕೆ ಸಚಿವ ಡಿ.ಕೆ.ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದು, ಈ ಕುರಿತ ಯಾವುದೇ ತನಿಖೆಗೂ ತಾವು ಸಿದ್ದ ಎಂದು ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ದೇವೆಗೌಡರು ತಮ್ಮ ವಿರುದ್ದ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು.
ರಾಮನಗರ ಲೋಕಸಭಾ ಕ್ಷೇತ್ರದ ಫಲಿತಾಂಶ ಹಾಗೂ ತಮ್ಮ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳ ಹತಾಶೆಯಿಂದ ದೇವೆಗೌಡರು ತಮ್ಮ ವಿರುದ್ದ ವಿನಾಕಾರಣ ಆರೋಪ ಮಾಡುತ್ತಿದ್ದಾರೆಂದು ತಿಳಿಸಿದರು.
ನೈಸ್ ಭೂ ಒತ್ತುವರಿ ವಿಚಾರದಲ್ಲಿ ಗೌಡರು ಮಾಡಿರುವ ಆರೋಪದಂತೆ ಆ ಸಂದರ್ಭದಲ್ಲಿ ನಾನು ಯಾವುದೇ ಸಚಿವನೂ ಆಗಿರಲಿಲ್ಲ. ಹಗರಣದ ತನಿಖೆಗೆ ದೇವೆಗೌಡರು ಒತ್ತಾಯಿಸುವುದು ಬೇಡ, ನಾನೇ ಖುದ್ದು ಮುಖ್ಯಮಂತ್ರಿಯವರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಕೇಳಿಕೊಂಡಿದ್ದೇನೆ ಎಂದರು.
ಸಮಿತಿಯೊಂದನ್ನು ನೇಮಿಸಿ ಸೂಕ್ತ ತನಿಖೆಗೆ ನಡೆಸುವಂತೆಯೂ ವಿನಂತಿಸಿಕೊಂಡಿದ್ದೇನೆ. ಅವರು ಯಾವುದೇ ರೀತಿಯ ತನಿಖೆಗೆ ಸೂಚಿಸಿದರೂ ಪ್ರಾಮಾಣಿಕವಾಗಿ ಸಹಕರಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದರು.