ಮುಂಬೈ : 'ಮಹಾರಾಷ್ಟ್ರ'ದಲ್ಲಿ, ದೇವೇಂದ್ರ ಫಡ್ನವೀಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವಾಸ ಮತ ಸಾಬೀತು ಪಡಿಸಿರುವ ಬಗ್ಗೆ ಉದ್ಭವಿಸಿರುವ ಅಸಮಾಧಾನ ಮುಂದುವರೆದಿದ್ದು, ಬಿಜೆಪಿಯ ಕೆಲ ಮುಖಂಡರು ಪಕ್ಷದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.
ವಿಶ್ವಾಸ ಮತ ಸಾಬೀತು ಸಂದರ್ಭದಲ್ಲಿ ಭ್ರಷ್ಟಚಾರದಲ್ಲೇ ಮುಳುಗಿದ್ದ ಎನ್.ಸಿ.ಪಿ ಪಕ್ಷ ಬೆಂಬಲ ವ್ಯಕ್ತಪಡಿಸಿರುವುದಕ್ಕೆ ಅಸಮಾಧಾನ ಹೊರಹಾಕಿರುವ ಕೆಲ ಬಿಜೆಪಿ ಮುಖಂಡರು ಆತ್ಮ ಕ್ಲೇಶ ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರವಿದ್ದ ಸಂದರ್ಭದಲ್ಲಿ ಎನ್.ಸಿ.ಪಿ, ಬಿಜೆಪಿ ಹಾಗೂ ಆರ್.ಎಸ್.ಎಸ್ ಕಾರ್ಯಕರ್ತರಿಗೆ ಕಿರುಕುಳ ನೀಡಿದೆ. ಹೀಗಿದ್ದರೂ ಬಿಜೆಪಿ, ಎನ್.ಸಿ.ಪಿ ಬೆಂಬಲ ಪಡೆದಿದ್ದು ಸರಿಯಲ್ಲ ಎಂದು ಅಹ್ಮದ್ ನಗರ್ ಜಿಲ್ಲಾ ಬಿಜೆಪಿ ನಾಯಕರು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಶ್ವಾಸ ಮತ ಸಾಬೀತು ಪಡಿಸುವ ಸಂದರ್ಭದಲ್ಲಿ ಎನ್.ಸಿ.ಪಿ ಬೆಂಬಲ ಪಡೆದಿರುವುದರಿಂದ ನಮಗೆ ತೀವ್ರ ನೋವುಂಟಾಗಿದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.
ಬಿಜೆಪಿ ಅತಿ ಹೆಚ್ಚು ಮತ ಗಳಿಸಲು ಪಕ್ಷದ ಕಾರ್ಯಕರ್ತರು ಶ್ರಮಿಸಿದ್ದಾರೆ. ಹಾಗೆಯೇ ರಾಜ್ಯದ ಜನತೆ ಕೂಟ ಎನ್.ಸಿ.ಪಿ ಕಾಂಗ್ರೆಸ್ ಪಕ್ಷವನ್ನು ವಿರೋಧ ಪಕ್ಷ ಸ್ಥಾನ ಪಡೆಯುವುದಕ್ಕೂ ಅನರ್ಹರನ್ನಾಗಿ ಮಾಡಿದ್ದಾರೆ. ಆದರೆ ಬಿಜೆಪಿ ಎನ್.ಸಿ.ಪಿ ಬೆಂಬಲ ಪಡೆದಿರುವುದರಿಂದ ಈಗ ನಾವು ಕಾರ್ಯಕರ್ತರಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇದೇ ವೇಳೆ ಶಿವಸೇನೆ ಉದ್ಧಟತನಕ್ಕೂ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು, ಚುನಾವಣಾ ಮೈತ್ರಿ ಹಾಗೂ ಸರ್ಕಾರ ರಚನೆ ಸಂದರ್ಭದಲ್ಲಿ ಶಿವಸೇನೆ ತೋರಿದ ಉದ್ಧಟತನವೇ ಇದಕ್ಕೆಲ್ಲಾ ಕಾರಣ. ಶಿವಸೇನೆ ಬಿಜೆಪಿಯೊಂದಿಗೆ ಕೈಜೋಡಿಸಿದ್ದರೆ ಎನ್.ಸಿ.ಪಿ ಬೆಂಬಲ ಪಡೆಯುವ ಅವಶ್ಯಕತೆ ಇರುತ್ತಿರಲಿಲ್ಲ ಎಂಬ ಅಭಿಪ್ರಾಯವೂ ವ್ಯಾಪಕವಾಗಿ ಕೇಳಿಬರುತ್ತಿದೆ.
ಮಹಾರಾಷ್ಟ್ರದಲ್ಲಿ ಅಲ್ಪಮತದ ಸರ್ಕಾರ ರಚಿಸಿರುವ ಬಿಜೆಪಿ, ವಿಶ್ವಾಸ ಮತ ಸಾಬೀತುಪಡಿಸಬೇಕಾದರೆ ಶಿವಸೇನೆ ಸರ್ಕಾರದ ವಿರುದ್ಧ ಮತ ಚಲಾಯಿಸಿತ್ತು. ಎನ್.ಸಿ.ಪಿ ಸಭಾತ್ಯಾಗ ಮಾಡುವ ಮೂಲಕ ಬಿಜೆಪಿ ವಿಶ್ವಾಸ ಮತ ಸಾಬೀತು ಪಡಿಸಲು ನೆರವು ನೀಡಿತ್ತು.