ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನಲ್ಲಿ ನಡೆದಿರುವ ಸ್ಪಾಟ್ ಫಿಕ್ಸಿಂಗ್ ಹಗರಣ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ತನಿಖಾ ಸಮಿತಿಯಲ್ಲಿ ಉಲ್ಲೇಖಿಸಲಾಗಿರುವ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿರುವವರ ಹೆಸರನ್ನು ಬಹಿರಂಗಗೊಳಿಸಿದೆ.
ನಿವೃತ್ತ ನ್ಯಾ. ಮುಕುಲ್ ಮುದ್ಗಲ್ ಸಮಿತಿ ನೀಡಿರುವ ವರದಿಯಲ್ಲಿ ಗುರುನಾಥ್ ಮೇಯಪ್ಪನ್, ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಹಾಗೂ ಐಪಿಎಲ್ ಫ್ರಾಂಚೈಸಿ ಮಾಲಿಕ ರಾಜ್ ಕುಂದ್ರಾ ಹೆಸರು ಪ್ರಮುಖವಾಗಿ ಬಹಿರಂಗವಾಗಿದೆ. ಪ್ರಕರಣದ 13 ಆರೋಪಿಗಳ ಪೈಕಿ 7 ಆರೋಪಿಗಳ ಹೆಸರನ್ನು ಸುಪ್ರೀಂ ಕೋರ್ಟ್ ಬಹಿರಂಗಗೊಳಿಸಿದ್ದು ಇದರಲ್ಲಿ ಕನ್ನಡಿಗ ಸ್ಟುವರ್ಟ್ ಬಿನ್ನಿ, ಒವೈಸ್ ಶಾ, ಸ್ಯಾಮುಯೆಲ್ ಬದ್ರಿ ಹೆಸರೂ ಇದೆ. ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನವೆಂಬರ್ 24ಕ್ಕೆ ಮುಂದೂಡಿದೆ.
2013ರ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಅವರು ಸತತ ನಾಲ್ಕು ತಿಂಗಳ ಕಾಲ ತನಿಖೆ ನಡೆಸಿ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿದ್ದರು. ವರದಿಯಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಮತ್ತು ಅವರ ಅಳಿಯ ಗುರುನಾಥನ್ ಮೇಯಪ್ಪನ್ ರನ್ನೊಳಗೊಂಡ 13 ಮಂದಿ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.
ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಗುರುನಾಥ್ ಮೇಯಪ್ಪನ್ ಧ್ವನಿ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಈಗಾಗಲೇ ಶ್ರೀಶಾಂತ್ ಸೇರಿದಂತೆ ಮೂವರು ಕ್ರಿಕೆಟಿಗರು ಶಿಕ್ಷೆ ಅನುಭವಿಸಿದ್ದಾರೆ. ಚೆನ್ನೈ ಹಾಗೂ ರಾಜಸ್ತಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿತ್ತು ಎಂಬ ಆರೋಪ ಕೇಳಿ ಬಂದಿತ್ತು. ತನಿಖಾ ಸಮಿತಿ ಮಹೇಂದರ್ ಸಿಂಗ್ ಧೋನಿ ಹಾಗೂ ಅವರ ಮ್ಯಾನೇಜರ್ ಅವರನ್ನೂ ತನಿಖಾ ಸಮಿತಿ ವಿಚಾರಣೆ ನಡೆಸಿತ್ತು.
ಇದೇ ವೇಳೆ ಪ್ರಕರಣದ ಅಂತಿಮ ಆದೇಶ ಬರುವವರೆಗೂ ಬಿಸಿಸಿಐ ಚುನಾವಣೆ ನಡೆಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.